06 August 2026 |

ಭಾರೀ ಮಳೆ ರಜೆ ನಿಯಮದಲ್ಲಿ ಬದಲಾವಣೆ? ದಕ್ಷಿಣ ಕನ್ನಡದಲ್ಲಿ ಇನ್ನು ಮುಂದೆ ತಾಲೂಕುವಾರು ರಜೆ ಘೋಷಣೆಗೆ ಚಿಂತನೆ

  • 27 Jul 2026 12:33:49 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ ಅಥವಾ ಅತಿವೃಷ್ಟಿ ಉಂಟಾದರೆ ಇಡೀ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸುವ ಪದ್ಧತಿ ಜಾರಿಯಲ್ಲಿದೆ. ಆದರೆ, ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ತಾಲೂಕುವಾರು ಶಾಲಾ ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

 

ಈವರೆಗೆ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಜಿಲ್ಲೆಯಾದ್ಯಂತ ರಜೆ ಘೋಷಿಸಲಾಗುತ್ತಿತ್ತು. ಆದರೆ, ಹಲವಾರು ಬಾರಿ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಭಾರೀ ಮಳೆಯಾಗಿದ್ದರೆ, ಉಳಿದ ಕಡೆಗಳಲ್ಲಿ ಅಲ್ಪ ಮಳೆ ಅಥವಾ ಮಳೆಯೇ ಇಲ್ಲದ ಪರಿಸ್ಥಿತಿ ಕಂಡುಬಂದಿತ್ತು. ಇದರಿಂದ ಸಾರ್ವಜನಿಕರು ಮತ್ತು ಪೋಷಕರಿಂದ ಟೀಕೆಗಳು ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಸ್‌ಗಳೂ ವೈರಲ್ ಆಗಿದ್ದವು.

 

ಪ್ರಸ್ತಾವಿತ ಹೊಸ ವ್ಯವಸ್ಥೆಯಡಿ, ತಹಶೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ (BEO) ಹಾಗೂ ಸ್ಥಳೀಯ ಅಧಿಕಾರಿಗಳಿಂದ ಸಲ್ಲಿಸಲಾದ ವರದಿಗಳ ಆಧಾರದ ಮೇಲೆ ಆಯಾ ತಾಲ್ಲೂಕಿನ ಪರಿಸ್ಥಿತಿಯನ್ನು ಪರಿಶೀಲಿಸಿ ರಜೆ ಘೋಷಿಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಇದರಿಂದ ಪ್ರತಿಕೂಲ ಹವಾಮಾನದಿಂದ ತೊಂದರೆಗೊಳಗಾಗುವ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾತ್ರ ರಜೆ ನೀಡುವ ಅವಕಾಶ ದೊರೆಯಲಿದೆ.

 

ಈ ಕುರಿತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ವಿದ್ಯಾರ್ಥಿಗಳ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದ್ದಾರೆ. ಅದೇ ವೇಳೆ, ನಿರಂತರವಾಗಿ ರಜೆ ಘೋಷಣೆಯಾಗುವುದರಿಂದ ಪಠ್ಯಕ್ರಮ ಪೂರ್ಣಗೊಳಿಸುವಲ್ಲಿ ಉಂಟಾಗುವ ತೊಂದರೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಆಗುವ ವ್ಯತ್ಯಯದ ಬಗ್ಗೆ ಶಿಕ್ಷಣ ಸಂಸ್ಥೆಗಳು ವ್ಯಕ್ತಪಡಿಸಿರುವ ಆತಂಕವನ್ನೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದುಬಂದಿದೆ.

 

ಇದರ ಜೊತೆಗೆ, ಜಿಲ್ಲಾಡಳಿತ ಅಧಿಕೃತವಾಗಿ ರಜೆ ಘೋಷಿಸಿದ್ದರೂ ತರಗತಿಗಳನ್ನು ನಡೆಸಿದ ಕೆಲವು ಶಾಲೆಗಳ ವಿರುದ್ಧವೂ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

 

ಈ ಹೊಸ ವ್ಯವಸ್ಥೆ ಜಾರಿಯಾದರೆ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡುವುದರ ಜೊತೆಗೆ ಅನಗತ್ಯ ರಜೆಗಳನ್ನು ತಪ್ಪಿಸಿ, ಶಾಲೆಗಳ ಪಠ್ಯಕ್ರಮ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಸುಗಮವಾಗಿ ಮುಂದುವರಿಸಲು ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.