28 July 2026 |

ಬಿ.ಸಿ.ರೋಡ್‌ನಲ್ಲಿ ಶಾಲಾ ಬಸ್‌ಗಳ ತಪಾಸಣೆ: ನಿಯಮ ಉಲ್ಲಂಘನೆ ಹಿನ್ನೆಲೆ ನಾಲ್ಕು ಬಸ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು

  • 27 Jul 2026 06:42:05 PM

ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಶಾಲಾ ಬಸ್ ದುರಂತದ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯಾದ್ಯಂತ ಶಾಲಾ ಬಸ್‌ಗಳ ದಾಖಲೆಗಳು ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನೆಯನ್ನು ತೀವ್ರಗೊಳಿಸಿದೆ.

 

ಇದರ ಭಾಗವಾಗಿ ಸೋಮವಾರ ಬಿ.ಸಿ.ರೋಡ್ ವೃತ್ತದ ಬಳಿ ಬಂಟ್ವಾಳ ನಗರ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಶಾಲಾ ಬಸ್‌ಗಳ ಪರಿಶೀಲನೆ ನಡೆಸಿದರು.

 

ತಪಾಸಣೆ ವೇಳೆ ಕೆಲವು ಬಸ್‌ಗಳಲ್ಲಿ ಅಗತ್ಯ ದಾಖಲೆಗಳ ಕೊರತೆ ಹಾಗೂ ವಿವಿಧ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದರಿಂದ ಒಟ್ಟು ನಾಲ್ಕು ಶಾಲಾ ಬಸ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ವಶಪಡಿಸಿಕೊಂಡ ವಾಹನಗಳಲ್ಲಿ ಮಂಗಳೂರಿನ ಬರಾಕಾ ವಿದ್ಯಾಸಂಸ್ಥೆಗೆ ಸೇರಿದ ಮೂರು ಬಸ್‌ಗಳು ಹಾಗೂ ಬಂಟ್ವಾಳದ ಬಡಕಬೈಲು ಮಜ್ಜಿಸ್ ವಿದ್ಯಾಸಂಸ್ಥೆಗೆ ಸೇರಿದ ಒಂದು ಬಸ್ ಸೇರಿವೆ. ಅಗತ್ಯ ದಾಖಲೆಗಳು ಪೂರ್ಣವಾಗಿರದ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕಾಗಿ ಬಸ್‌ಗಳನ್ನು ಸಾರಿಗೆ ಇಲಾಖೆ ವಶಕ್ಕೆ ತೆಗೆದುಕೊಂಡಿದೆ.

 

ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಶಾಲಾ ಬಸ್ ದುರಂತದ ನಂತರ ಸಂಬಂಧಿತ ಬಸ್‌ನ ದಾಖಲೆಗಳ ಪರಿಶೀಲನೆ ವೇಳೆ ಹಲವು ಲೋಪಗಳು ಬೆಳಕಿಗೆ ಬಂದಿದ್ದವು. ಈ ಸಂಬಂಧ ಶಾಲಾ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

 

ಈ ಬೆಳವಣಿಗೆಯ ನಂತರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಾಲಾ ಬಸ್‌ಗಳ ಸುರಕ್ಷತೆ ಹಾಗೂ ದಾಖಲಾತಿಗಳ ಪರಿಶೀಲನೆ ಮುಂದುವರಿಯಲಿದ್ದು, ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಇದೀಗ ಕೈಗೊಂಡಿರುವ ಕಾರ್ಯಾಚರಣೆ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲ್ಲಡ್ಕ ದುರಂತ ಸಂಭವಿಸಿ ಹಲವು ದಿನಗಳ ಬಳಿಕವೇ ವ್ಯಾಪಕ ತಪಾಸಣೆ ಆರಂಭವಾಗಿರುವುದಕ್ಕೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಬಿ.ಸಿ.ರೋಡ್‌ನ ಒಂದೇ ಕಾರ್ಯಾಚರಣೆಯಲ್ಲಿ ನಾಲ್ಕು ಬಸ್‌ಗಳಲ್ಲಿ ಲೋಪಗಳು ಪತ್ತೆಯಾಗಿರುವುದು, ಇಂತಹ ವಾಹನಗಳು ಇದುವರೆಗೆ ಹೇಗೆ ಸಂಚರಿಸುತ್ತಿದ್ದವು ಎಂಬ ಅನುಮಾನಕ್ಕೂ ಕಾರಣವಾಗಿದೆ.

 

ಶಾಲಾ ಮಕ್ಕಳ ಸುರಕ್ಷತೆಗಾಗಿ ನಿಯಮಿತ ಹಾಗೂ ನಿರಂತರ ತಪಾಸಣೆ ಅತ್ಯಗತ್ಯವಾಗಿದೆ. ದುರಂತ ಸಂಭವಿಸಿದ ಬಳಿಕ ಮಾತ್ರ ಕ್ರಮ ಕೈಗೊಳ್ಳುವುದಕ್ಕಿಂತ, ಮುನ್ನೆಚ್ಚರಿಕೆಯ ಭಾಗವಾಗಿ ನಿರಂತರ ಮೇಲ್ವಿಚಾರಣೆ ನಡೆಸಿದರೆ ಇಂತಹ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.