05 June 2025 | Join group

ಕೊರಗಜ್ಜನ ಮಹಿಮೆ: ನಟಿ ಇಳಾ ವಿಟ್ಲ ಕಳೆದುಕೊಂಡ ಮೊಬೈಲ್ ಮರಳಿ ಸಿಕ್ಕ ಅನುಭವ!

  • 04 May 2025 03:09:23 PM

ಮಂಗಳೂರು, ಮೇ 04: ತುಳುನಾಡಿನ ಜನರಲ್ಲಿ ಕೊರಗಜ್ಜನ ಬಗ್ಗೆ ಅಪಾರ ಭಕ್ತಿ. ಕೇವಲ ಸಣ್ಣ ಪುಟ್ಟ ಹರಕೆಗಳನ್ನು ಹೊತ್ತು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕೊರಗಜ್ಜನ ಎದುರು ತೋಡಿಕೊಂಡರೆ, ನಮಗೆ ಫಲ ದೊರೆಯುವುದು ಖಂಡಿತ. ಸಾಮಾನ್ಯವಾಗಿ ತಮ್ಮ ಅಮೂಲ್ಯವಾದ ವಸ್ತುಗಳು ಕಳೆದು ಹೋದ ಸಂದರ್ಭದಲ್ಲಿ ತುಳುನಾಡಿನ ಜನರಿಗೆ ಮೊದಲು ನೆನಪಾಗುವ ದೈವವೆಂದರೆ ಅದು ಕೊರಗಜ್ಜ.

 

ಇದಕ್ಕೆ ಸಾಕ್ಷಿಯಂತೆ, ಮಂಗಳೂರು ಸಮೀಪದ ಉಳ್ಳಾಲದ ಕುತ್ತಾರಿನ ಕೊರಗಜ್ಜನ ಮಹಿಮೆ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ. ಬಾಲಿವುಡ್ ನ ಕತ್ರಿನಾ ಕೈಫ್ ನಿಂದ ಹಿಡಿದು ಸ್ಯಾಂಡಲ್ ವುಡ್ ನ ರಕ್ಷಿತಾ ಕೂಡ ಈ ಕೊರಗಜ್ಜನ ಭಕ್ತೆ. ಸುನಿಲ್ ಶೆಟ್ಟಿ, ಕೆ ಎಲ್ ರಾಹುಲ್ ಕುಟುಂಬ ಸಮೇತರಾಗಿ ಬಂದು ಹರಕೆ ಕೊಳದಲ್ಲಿ ಭಾಗಿಯಾಗಿದ್ದರು.

 

ಇದೀಗ ಕನ್ನಡ ಕಿರುತೆರೆ ಬೆಳ್ಳಿತೆರೆ ನಟಿ ಇಳಾ ವಿಟ್ಲ ಕೂಡ ದೈವಕ್ಷೇತ್ರ ಸಂದರ್ಶಿಸಿ ಪ್ರಾರ್ಥಿಸಿದ್ದಾರೆ. ಮೂಲತಃ ಕರಾವಳಿಯ ವಿಟ್ಲದವರೇ ಆಗಿರುವ ಇಳಾ ವಿಟ್ಲ KUDLADAKLU (ಕುಡ್ಲದಕ್ಲು) ಎಂಬ ತುಳು ವಾಹಿನಿಯಲ್ಲಿ ಕೊರಗಜ್ಜನ ಪವಾಡದ ಬಗ್ಗೆ ಹಂಚಿಕೊಂಡಿದ್ದಾರೆ.

 

ಇಳಾ ವಿಟ್ಲ ಕುತ್ತಾರ್ ಕೊರಗಜ್ಜನ ಮಹಿಮೆ ಬಗ್ಗೆ ಹೇಳಿದ್ದೇನು ?

"ವಸಂತ ರುಕ್ಮಿಣಿ ಅನ್ನೋ ಸಿನಿಮಾ ಚಿತ್ರೀಕರಣದ ವೇಳೆ ನನ್ನ ಹೊಸ ಮೊಬೈಲ್ ಕಳೆದು ಹೋಗಿತ್ತು. ಹೀಗಾಗಿ ಹಳೆಬೀಡು ಪೊಲೀಸ್ ಸ್ಟೇಷನ್‌ಗೆ ದೂರು ನೀಡಿದ್ದೆ. ಇನ್ನೂ ಒಂದು ತಿಂಗಳ ಇಎಮ್ಐ ಕಟ್ಟೋಕೂ ಶುರು ಮಾಡಿರಲಿಲ್ಲ. ಸ್ನೇಹಿತರ ಸಲಹೆಯ ಮೇರೆಗೆ ಇಂಥ ಸಂದರ್ಭದಲ್ಲಿ ಮತ್ತೆ ಮೊಬೈಲ್ ಸಿಗಲೇಬೇಕು ಅಂತ ಕೊರಗಜ್ಜನಿಗೆ ಹರಕೆ ನೀಡಿದ್ದೆ.‌ ತಿಂಗಳ ಬಳಿಕ ಮಂಗಳೂರಲ್ಲಿ ಸಿಕ್ಕಿರುವುದಾಗಿ ಹಳೇಬೀಡು ಪೊಲೀಸರು ತಿಳಿಸಿದ್ದರು. ಚಿಕ್ಕ ಮಗಳೂರಲ್ಲಿ ಮೊಬೈಲ್ ಹೇಗೆ ಕಳೆದು ಹೋಗುವಾಗ ಹೇಗಿತ್ತೋ, ಮಂಗಳೂರಿಗೆ ಮಾರಾಟಗೊಂಡಿದ್ದ ಆ ಮೊಬೈಲ್ ಅಷ್ಟೇ ಚೆನ್ನಾಗಿಯೇ ಸಿಕ್ಕಿತ್ತು." ಎಂದಿದ್ದಾರೆ ನಟಿ ಇಳಾ ವಿಟ್ಲ.

 

ಶುಕ್ರವಾರ ಮಂಗಳೂರಲ್ಲಿ ಕರ್ಪ್ಯೂ ಹಾಕಲಾಗಿತ್ತು. ಇದರ ಮಧ್ಯೆಯೇ ಇಳಾ ತನ್ನ ಆಪ್ತ ಬಂಧುಗಳೊಂದಿಗೆ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಾದ 'ಕಾದಂಬರಿ', 'ಸೊಸೆ ತಂದ ಸೌಭಾಗ್ಯ' ಹಾಗೂ 'ಶೈಲೂ' ಸಿನಿಮಾಗಳಲ್ಲಿನ ನಟಿಸಿರುವ ಇಳಾ ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶಾಂತಿನಿವಾಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.