09 March 2026

ಪ್ರಧಾನಿ ಮೋದಿಯ 'ಒಂದು ಫೋನ್ ಕರೆ' ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಬಹುದು: ಯುಎಇ ವಿದೇಶಾಂಗ ರಾಯಭಾರಿ ಹುಸೇನ್ ಅಲ್‌ಸಯೇಘ್ ಅಭಿಪ್ರಾಯ

  • 09 Mar 2026 09:58:43 PM

ಯುಎಇಯಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಭದ್ರತೆ ಹಾಗೂ ಪ್ರಾದೇಶಿಕ ಶಾಂತಿಗಾಗಿ ಭಾರತ ಮಹತ್ವದ ಪಾತ್ರ ವಹಿಸಬಹುದು ಎಂದು ಯುಎಇಯ ವಿದೇಶಾಂಗ ರಾಯಭಾರಿ ಹುಸೇನ್ ಹಸನ್ ಮಿರ್ಜಾ ಅಲ್‌ಸಯೇಘ್ ಅಭಿಪ್ರಾಯಪಟ್ಟಿದ್ದಾರೆ.

 

ಮಾಧ್ಯಮ ಸಂಸ್ಥೆ ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಅವರು ಭಾರತ ಮತ್ತು ಅದರ ನಾಯಕತ್ವದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

 

“ಭಾರತ ಮಹಾನ್ ದೇಶ. ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಹಾಗೂ ಪ್ರತಿಷ್ಠೆ ಬಹಳ ಬಲವಾಗಿದೆ. ವಿಶೇಷವಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇರಾನ್ ಮತ್ತು ಇಸ್ರೇಲ್ ದೇಶಗಳೊಂದಿಗೆ ಉತ್ತಮ ಸಂಬಂಧವಿದೆ. ಈ ಎರಡೂ ದೇಶಗಳ ನಾಯಕರಿಗೆ ಪ್ರಧಾನಿ ಮೋದಿ ಒಂದು ಕರೆ ಮಾಡಿದರೆ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಸಹಾಯವಾಗಬಹುದು ಎಂಬ ವಿಶ್ವಾಸ ನನಗಿದೆ,” ಎಂದು ಅವರು ಹೇಳಿದರು.

 

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ತೀವ್ರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಮಧ್ಯಸ್ಥಿಕೆ ವಹಿಸುವ ಮೂಲಕ ಶಾಂತಿಯನ್ನು ಸ್ಥಾಪಿಸಲು ಸಾಧ್ಯ ಎಂದು ಅವರು ನಂಬಿಕೆ ವ್ಯಕ್ತಪಡಿಸಿದರು.

 

ಯುಎಇಯ ಅಭಿವೃದ್ಧಿಯಲ್ಲಿ ಭಾರತೀಯರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ ಅವರು, “ನಮ್ಮ ದೇಶದ ಮೂಲಸೌಕರ್ಯ ಅಭಿವೃದ್ಧಿ, ವ್ಯಾಪಾರ ಮತ್ತು ಉದ್ಯಮಗಳಲ್ಲಿ ಭಾರತೀಯ ಸಮುದಾಯ ಮಹತ್ವದ ಪಾತ್ರ ವಹಿಸಿದೆ. ಆದ್ದರಿಂದ ಇಲ್ಲಿ ವಾಸಿಸುತ್ತಿರುವ ಭಾರತೀಯರ ಭದ್ರತೆ ಮತ್ತು ಕಲ್ಯಾಣ ನಮಗೆ ಬಹಳ ಮುಖ್ಯ. ಈ ಕಾರಣಕ್ಕಾಗಿ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಲಿದೆ ಎಂಬ ನಿರೀಕ್ಷೆ ಇದೆ,” ಎಂದು ಹೇಳಿದರು.

 

ಯುಎಇಯಲ್ಲಿ ಲಕ್ಷಾಂತರ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಭಾರತ ಮತ್ತು ಯುಎಇ ನಡುವಿನ ಸ್ನೇಹಪೂರ್ಣ ಸಂಬಂಧಗಳು ಇನ್ನಷ್ಟು ಬಲವಾಗಬೇಕೆಂದು ಅವರು ಆಶಿಸಿದ್ದಾರೆ.