ನವದೆಹಲಿ: ಕೇರಳ ಕರಾವಳಿಯ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡ ಸರಕು ಹಡಗಿನಲ್ಲಿ ಸಿಲುಕಿದ್ದ 12 ಮಂದಿ ಚೀನಾ ಪ್ರಜೆಗಳನ್ನು ಭಾರತೀಯ ಸೇನೆ ಸುರಕ್ಷಿತವಾಗಿ ರಕ್ಷಿಸಿದ ಕಾರ್ಯಕ್ಕೆ ಭಾರತದಲ್ಲಿರುವ ಚೀನಾದ ರಕ್ಷಣಾ ಅಟ್ಯಾಶೆ ರಿಯರ್ ಅಡ್ಮಿರಲ್ ಯು ಜಿಯನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಂಕಷ್ಟದ ಸಂದರ್ಭದಲ್ಲಿ ಭಾರತೀಯ ಸೇನೆ ತೋರಿದ ತ್ವರಿತ ಸ್ಪಂದನೆ, ವೃತ್ತಿಪರತೆ ಹಾಗೂ ಮಾನವೀಯ ಸೇವೆ ಶ್ಲಾಘನೀಯ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿಯೂ ಭಾರತೀಯ ಹಾಗೂ ಚೀನಾ ಸಶಸ್ತ್ರ ಪಡೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿರುವುದನ್ನು ಉಲ್ಲೇಖಿಸಿದ ಅವರು, ಇಂತಹ ಸಹಕಾರವು ಎರಡೂ ರಾಷ್ಟ್ರಗಳ ನಡುವಿನ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇರಳ ಕರಾವಳಿಯಲ್ಲಿ ನಡೆದ ಈ ರಕ್ಷಣಾ ಕಾರ್ಯ ದೇಶ-ವಿದೇಶಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.





