ಮಂಗಳೂರು: ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ತಂಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಜುಲೈ 22ರಿಂದ 25ರವರೆಗೆ ನಗರದ ವಿವಿಧ ಭಾಗಗಳಲ್ಲಿ ಈ ಅಭ್ಯಾಸ ಮುಂದುವರಿಯಲಿದೆ.
ಭದ್ರತಾ ವ್ಯವಸ್ಥೆಗಳ ಸನ್ನದ್ಧತೆ ಹಾಗೂ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಪರಿಶೀಲಿಸುವ ಉದ್ದೇಶದಿಂದ ಈ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಬುಧವಾರ ಮಂಗಳೂರಿನ ಆಕಾಶದಲ್ಲಿ ಹೆಲಿಕಾಪ್ಟರ್ಗಳ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಹೆಲಿಕಾಪ್ಟರ್ಗಳು ನಗರದ ಮೇಲೆ ಅತ್ಯಂತ ಕಡಿಮೆ ಎತ್ತರದಲ್ಲಿ ಸಂಚರಿಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದರು. ನಂತರ ಇದು ಎನ್ಎಸ್ಜಿಯ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆಯ ಭಾಗ ಎಂಬ ಮಾಹಿತಿ ತಿಳಿದ ಬಳಿಕ ಜನರು ನಿರಾಳರಾದರು.





