ಪಶ್ಚಿಮ ಬಂಗಾಳ, ಮೇ 05: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂದೂಗಳ ವಿರುದ್ಧ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾದ ಮುರ್ಷಿದಾಬಾದ್ ಮತ್ತು ಮಾಲ್ಡಾ ಪ್ರದೇಶಗಳಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ್ದು ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕುಸಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ರಾಜ್ಯಪಾಲರು ಆ ವರದಿಯಲ್ಲಿ ನಮೂದಿಸಿದ್ದಾರೆ.
ಪರಿಸ್ಥಿತಿ ಹದಗೆಡುತ್ತಲೇ ಇದ್ದರೆ, ಸಂವಿಧಾನದ 356 ನೇ ವಿಧಿಯನ್ನು ಅನ್ವಯಿಸಬೇಕು ಎಂದು ರಾಜ್ಯಪಾಲರು ಬರೆದಿದ್ದಾರೆ ಎಂದು ವರದಿಯಾಗಿದೆ. ಸಂವಿಧಾನದ 356 ನೇ ವಿಧಿಯು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಅವಕಾಶವನ್ನು ಒಳಗೊಂಡಿದೆ.
ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಮೂರು ವಿಷಯಗಳನ್ನು ಪರಿಗಣಿಸಿದ್ದಾರೆ. ಮಮತಾ ಬೆನೆರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದರೆ, ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವುದು. ಪ್ರತ್ಯೇಕ ತನಿಖಾ ಆಯೋಗದ ನೇಮಕ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಆತಂಕ ಇರುವ ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳು ಅಥವಾ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪೋಸ್ಟ್ ಸ್ಥಾಪಿಸುವುದಾಗಿರುತ್ತದೆ.
ಕಳೆದ ತಿಂಗಳು, ತಿದ್ದುಪಡಿ ಮಾಡಿದ ವಕ್ಫ್ ಕಾಯ್ದೆಯ ಕುರಿತು ಮುರ್ಷಿದಾಬಾದ್ನ ಹಲವಾರು ಪ್ರದೇಶಗಳಿಗೆ ಅಶಾಂತಿ ಹರಡಿತು. ಮುಸ್ಲಿಂ ಪ್ರತಿಭಟನಾಕಾರರ ಹಿಂಸಾಚಾರದಲ್ಲಿ ತಂದೆ-ಮಗ ಸೇರಿದಂತೆ 3 ಜನರು ಸಾವನ್ನಪ್ಪಿದರು.