21 August 2026 |

ಮಳೆ ರಜೆಯಿಂದ ಶಾಲಾ ವೇಳಾಪಟ್ಟಿಯಲ್ಲಿ ಬದಲಾವಣೆ; ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ!

  • 21 Aug 2026 08:09:18 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಘೋಷಿಸಲಾದ ಶಾಲಾ ರಜೆಗಳಿಂದ ಉಂಟಾದ ಬೋಧನಾ ಅವಧಿಯ ಕೊರತೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಬೋಧನಾ ವೇಳಾಪಟ್ಟಿಯಲ್ಲಿ ತಿದ್ದುಪಡಿ ಮಾಡಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಾಲೆಗಳಿಗೆ ಹಲವು ಬಾರಿ ರಜೆ ಘೋಷಿಸಲಾಗಿತ್ತು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ರಜೆ ನೀಡುವುದು ಅನಿವಾರ್ಯವಾಗಿದ್ದರೂ, ಇದರಿಂದ ಶೈಕ್ಷಣಿಕ ಅವಧಿ ಹಾಗೂ ಪಠ್ಯಕ್ರಮ ಪೂರ್ಣಗೊಳಿಸುವಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಳೆದುಹೋದ ಬೋಧನಾ ದಿನಗಳನ್ನು ಮುಂದಿನ ಅವಧಿಯಲ್ಲಿ ಸರಿದೂಗಿಸಲು ಇಲಾಖೆ ಕ್ರಮ ಕೈಗೊಂಡಿದೆ. 

 

ಇದರ ಭಾಗವಾಗಿ ಸೆಪ್ಟೆಂಬರ್ 12ರಂದು ಬರುವ 2ನೇ ಶನಿವಾರದಂದು ಶಾಲೆಗಳಲ್ಲಿ ಪೂರ್ಣದಿನದ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಸಾಮಾನ್ಯವಾಗಿ ಶನಿವಾರದಂದು ಅರ್ಧದಿನ ತರಗತಿಗಳು ನಡೆಯುತ್ತವೆ. ಆದರೆ ಮಳೆ ರಜೆಯಿಂದ ಉಂಟಾದ ಬೋಧನಾ ಅವಧಿಯ ಕೊರತೆಯನ್ನು ಸರಿದೂಗಿಸಲು ಹೆಚ್ಚುವರಿ ಬೋಧನಾ ಅವಧಿ ನೀಡಲಾಗುತ್ತಿದೆ.

 

ಮಳೆ ಅಥವಾ ಇತರ ಅನಿರೀಕ್ಷಿತ ಕಾರಣಗಳಿಂದ ಶಾಲೆಗಳಿಗೆ ರಜೆ ಘೋಷಣೆಯಾದ ಸಂದರ್ಭದಲ್ಲಿ, ಮುಂದಿನ ರಜಾ ದಿನಗಳಲ್ಲಿ ಪೂರ್ಣದಿನದ ಶಾಲೆ ನಡೆಸಿ ಕಳೆದುಹೋದ ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಲು ಶಿಕ್ಷಣ ಇಲಾಖೆಯ ಶೈಕ್ಷಣಿಕ ಮಾರ್ಗಸೂಚಿಗಳಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. 

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಮಳೆಯಿಂದಾಗಿ ಹಲವು ಹಂತಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಜುಲೈ ತಿಂಗಳಲ್ಲಿಯೂ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. 

 

ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ, ನಿಗದಿತ ಶೈಕ್ಷಣಿಕ ವೇಳಾಪಟ್ಟಿಯಂತೆ ಪಠ್ಯಕ್ರಮ ಪೂರ್ಣಗೊಳಿಸುವುದು ಶಿಕ್ಷಣ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಮಳೆ ರಜೆಯಿಂದ ಉಂಟಾದ ಶೈಕ್ಷಣಿಕ ನಷ್ಟವನ್ನು ಹೆಚ್ಚುವರಿ ತರಗತಿಗಳ ಮೂಲಕ ಸರಿದೂಗಿಸುವ ಕ್ರಮ ಕೈಗೊಳ್ಳಲಾಗಿದೆ.