ಪುತ್ತೂರು, ಮೇ 06: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಜೊತೆ ಗಟ್ಟಿಯಾಗಿ ನಿಂತು ಪುತ್ತಿಲರವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಐವತ್ತು ಸಾವಿರಕ್ಕಿಂತಲೂ ಹೆಚ್ಚು ಮತ ಪಡೆಯಲು ದುಡಿದವರಲ್ಲಿ ಎಡಕ್ಕಾನ ರಾಜಾರಾಮ್ ಭಟ್ ಒಬ್ಬರು. ಇಂದು ವಿದೇಶದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.
ಸುಳ್ಯ ತಾಲ್ಲೂಕಿನ ಕಲ್ಮಡ್ಕ ಗ್ರಾಮದ ಉದ್ಯಮಿ ರಾಜಾರಾಮ ಭಟ್ ಅವರು ಮಂಗಳವಾರ ಮುಂಜಾನೆ ಮಸ್ಕತ್ ದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಮರಳಿದ ನಂತರ ಆಕ್ರೋಶಗೊಂಡು ವೈಮನಸ್ಸು ಕಟ್ಟುಕೊಂಡಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲರವರಿಗೆ ಬಿಜೆಪಿ ಸೀಟು ನಿರಾಕರಣೆ ಮಾಡಿದ ಪರಿಣಾಮ ಕೋಪಗೊಂಡ ಪುತ್ತಿಲ ಅಭಿಮಾನಿಗಳು, 'ಪುತ್ತಿಲ ಪರಿವಾರ' ಎಂಬ ಸಂಘಟನೆ ಕಟ್ಟಿಕೊಂಡು ಬಿಜೆಪಿ ವಿರುದ್ಧವೇ ಪುತ್ತಿಲರವರನ್ನು ಕಣಕ್ಕೆ ಇಳಿಸಿದ್ದರು. ಇದರಲ್ಲಿ ದೊಡ್ಡ ಪಾತ್ರ ವಹಿಸಿದವರು ರಾಜರಾಮ್ ಭಟ್.
ಈ ಹಿಂದೆ ಕೊರತಿ ದೈವದ ಹಿಂದೆ ಇವರು ನಡೆಸಿದ ವಾಗ್ವಾದ ಕೂಡ ಕರಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಮತ್ತು ಚರ್ಚೆಗೆ ಪಾತ್ರವಾಗಿತ್ತು.
ಮಂಗಳವಾರ ಮುಂಜಾನೆ ತನ್ನ ಉಸಿರಾಟದಲ್ಲಿ ತೊಂದರೆ ಬಂದ ಕಾರಣ ಇವರ ಹಠಾತ್ ಸಾವಿಗೆ ಕಾರಣವಾಯಿತೆಂದು ತಿಳಿದು ಬಂದಿದೆ. ತಕ್ಷಣ ಆಸ್ಪತೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮರಣ ಹೊಂದಿದರು ಎಂದು ತಿಳಿದು ಬಂದಿದೆ.