ಬೆಂಗಳೂರು, ಮೇ 07: ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳಿಗೆ ಭಾರತ ದಾಳಿ ನಡೆಸಿದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಎಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಅಚ್ಚರಿಯ ಪೋಸ್ಟ್ ಹಾಕುವುದರ ಮೂಲಕ ಶಾಂತಿಯ ಸಂದೇಶವನ್ನು ಕಳುಹಿಸಲು ಪ್ರಯತ್ನಿಸಿದೆ.
ಪಹಲ್ಗಾಮ್ ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳಿಗೆ ದಾಳಿ ನಡೆಸಿದ್ದು, ಸಂಪೂರ್ಣ ಭಾರತ ಪಹಲ್ಗಾಮ್ ದಾಳಿಗೆ ಪ್ರತೀಕಾರ ಪಡೆದ ಖುಷಿಯ ಸಂಭ್ರಮದಲ್ಲಿದ್ದರೆ ಕರ್ನಾಟಕ ಕಾಂಗ್ರೆಸ್ ಮಹಾತ್ಮಾ ಗಾಂಧೀಜಿಯ ಶಾಂತಿಯ ಸಂದೇಶವನ್ನು ಹಂಚಿಕೊಂಡಿರುವುದು ನಾಚಿಗೇಡಿನ ವಿಷಯ ಎಂದು ಜನತೆ ವ್ಯಕ್ತಪಡಿಸಿದ್ದಾರೆ.
"ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ - ಮಹಾತ್ಮಾ ಗಾಂಧಿ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. 'ಆಪರೇಷನ್ ಸಿಂದೂರ್' ಬೆನ್ನಲ್ಲೇ ಈ ರೀತಿಯ ಕಾಂಗ್ರೆಸ್ಸಿನ ಪೋಸ್ಟ್ ಗೆ ನೆಟ್ಟಿಗರು, ಸಾರ್ವಜನಿಕರು 'ಛೀ..ಥೂ..' ಎಂದು ತೀವ್ರ ಆಕ್ರೋಶ ವ್ಯಕ್ತ ಮಾಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್ ಮಾಯವಾಗಿದೆ.
ನಂತರದ ಟ್ವೀಟ್ ನಲ್ಲಿ 'ವಿಶ್ವದ ಬಲಿಷ್ಠ ವಾಯುಪಡೆಗಳಲ್ಲಿ ಒಂದೊಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಭಾರತೀಯ ವಾಯುಪಡೆ ಹೇಡಿತನದ ಪಹಲ್ಗಾಮ್ ದಾಳಿಗೆ ತಕ್ಕ ಉತ್ತರ ನೀಡಿದೆ. ಈ ವಿಚಾರದಲ್ಲಿ ನಾವು ಕೇಂದ್ರ ಸರಕಾರ ಮತ್ತು ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ' ಎಂದು ಬರೆದು ಯು ಟರ್ನ್ ಮಾಡಿದ್ದಾರೆ.