ನವದೆಹಲಿ, ಮೇ 07: ಭಾರತ ಬುಧವಾರ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನದಲ್ಲಿದ್ದ 9 ಉಗ್ರರ ನೆಲೆಗಳಿಗೆ ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಸತ್ತಿರುವ ಬಗ್ಗೆ ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ದೃಢ ನಿರ್ಧಾರ, ಅಜಿತ್ ಡೋವಲ್ ರಂತಹ ಸೇನಾ ಸಲಹೆಗಾರರ ನಿರ್ದೇಶನದಂತೆ ಈ ಆಪರೇಷನ್ ಯಶಸ್ವೀಯಾಗಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ 9 ಉಗ್ರ ತಾಣಗಳಿಗೆ ಗುರಿಯಾಗಿಸಿಕೊಂಡು, ಉಗ್ರರ ಸಂಹಾರ ಮಾಡಿ ಪಹಲ್ಗಾಮ್ ನಲ್ಲಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿಯನ್ನು ದೊರಕಿಸಿ ಕೊಟ್ಟಂತಾಗಿದೆ.
ಈ ಸಾಧನೆಯ ನಂತರ ಭಾರತೀಯ ಸೇನಾ ಮುಖ್ಯಸ್ಥರುಗಳು ಈ ದಾಳಿಯ ಸಂಪೂರ್ಣ ಮಾಹಿತಿಯನ್ನು ವಿಡಿಯೋ ಮೂಲಕ ಮಾಧ್ಯಮಗಳಿಗೆ ವಿಶ್ಲೇಷಣೆ ಮಾಡಿರುವುದು ತುಂಬಾ ವಿಶೇಷವಾಗಿತ್ತು. ಇದರ ಜೊತೆಗೆ ಈ ಬಾರಿಯ ಮಾಧ್ಯಮ ವಿವರಣೆ 2 ಮಹಿಳಾ ಸೇನಾ ಮುಖ್ಯಸ್ಥರು ವಿವರಣೆ ನೀಡಿದ್ದು ಬಹಳ ಕುತೂಹಲಕಾರಿಯಾಗಿತ್ತು.
ಬಲ್ಲವರ ಅಭಿಪ್ರಾಯ ಪ್ರಕಾರ, ಇದು ಕೂಡ ಒಂದು ರೀತಿಯ ಕೇಂದ್ರ ಸರಕಾರ ಮತ್ತು ಸೇನೆಯ ಮಾಸ್ಟರ್ ಸ್ಟ್ರೋಕ್ ಎನ್ನುತ್ತಾರೆ.
ಈ ಹಿಂದೆ ಬಾಲಾಕೋಟ್ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಗೆ ಭಾರತ ದಾಳಿ ನಡೆಸಿದಾಗ ವಿರೋಧ ಪಕ್ಷಗಳು ಸಾಲು ಸಾಲಾಗಿ ಸೈನಿಕರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸದೆ, 'ದಾಳಿಯ ಪುರಾವೆ' ಕೇಳಿರುವುದು ಭಾರತದ ಸೈನಿಕರ ಸಾಮರ್ಥ್ಯಕ್ಕೆ ಕಪ್ಪು ಚುಕ್ಕೆ ಇಟ್ಟಂದಾಗಿತ್ತು.
ಈ ಹಿಂದೆ ಭಾರತ ಸೇನೆಯ 'ಸರ್ಜಿಕಲ್ ಸ್ಟ್ರೈಕ್' ಬಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಪಿ ಚಿದಂಬರಂ, ದಿಗ್ವಿಜಯ್ ಸಿಂಗ್, ಸ್ಯಾಮ್ ಪಿಟ್ರೊಡ, ನಟ ಓಂ ಪುರಿ ಮತ್ತಿತರು ವಿಡಿಯೋ ಪುರಾವೆ ತೋರಿಸಿ ಎಂದು ಕೇಂದ್ರ ಸರಕಾರ ಮತ್ತು ಭಾರತೀಯ ಸೇನೆಗೆ ಮನವಿ ಮಾಡಿದ್ದು, ಭಾರತೀಯ ಸೇನೆಯ ಬಗ್ಗೆ ಈ ಪಕ್ಷ ಮತ್ತು ಪಕ್ಷದ ಮುಖಂಡರಿಗೆ ಇರುವ ವಿಶ್ವಾಸದ ಬಗ್ಗೆ ಸಂಶಯ ಹುಟ್ಟಿತ್ತು. ಈ ಹೇಳಿಕೆಗಳ ವಿರುದ್ಧ ದೇಶಭಕ್ತ ಭಾರತೀಯರು ಅತೀವ ಬೇಸರ ವ್ಯಕ್ತಪಡಿಸಿದ್ದರು.