ದೆಹಲಿ, ಮೇ 07: ಬುಧವಾರ ಬೆಳಿಗ್ಗೆ ಭಾರತ ನಡೆಸಿದ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲಿನ ದಾಳಿ ದೇಶದಾದ್ಯಂತ ವಿಮಾನ ಸಂಚಾರದಲ್ಲಿ ಸಂಚಲನ ಮೂಡಿಸಿದೆ. ಈ ಹಿನ್ನಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರ ಜೊತೆಗೆ ಶ್ರೀನಗರ ಸೇರಿದಂತೆ ಕನಿಷ್ಠ 25 ವಿಮಾನ ನಿಲ್ದಾಣಗಳನ್ನು ಕಾರ್ಯಾಚರಣೆಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಿಗೆ ತಮ್ಮ ಸೇವೆಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೋ, ಸ್ಪೈಸ್ ಜೆಟ್, ಆಕಾಶ್ ಏರ್ ಮತ್ತು ಇನ್ನಿತರ ವಿದೇಶಿ ವಿಮಾನಯಾನ ಸಂಸ್ಥೆಗಳು ಈ ಸ್ಥಳಗಳಿವೆ ತಮ್ಮ ವಿಮಾನ ಹಾರಾಟವನ್ನು ರದ್ದುಗೊಳಿಸಿದ್ದಾರೆ.
'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' ಮಾದ್ಯಮದಲ್ಲಿ ವರದಿಯಾದ ಪ್ರಕಾರ, ಸುಮಾರು 300 ಕ್ಕೂ ಹೆಚ್ಚು ವಿಮಾನಗಳು ಮತ್ತು 25 ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಕಾರ್ಯಾಚರಣೆಗಾಗಿ ಮುಚಲ್ಪಟ್ಟಿದೆ ಎಂದು ತಿಳಿಸಲಾಗಿದೆ. ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಶ್ರೀನಗರ, ಲೇಹ್, ಪಠಾಣ್ ಕೋಟ್, ಅಮೃತಸರ, ಚಂಡೀಗಢ, ಜೋಧಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್ ನಗರ ಸದ್ಯಕ್ಕೆ ಮುಚ್ಚಲಾಗಿರುವ ವಿಮಾನ ನಿಲ್ದಾಣಗಳು ಎಂದು ತಿಳಿದು ಬಂದಿದೆ.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೀಗೆ ಮುಂದುವರಿದರೆ, ವಿಮಾನಯಾನದ ಸಂಚಾರದಲ್ಲಿ ಅಡಚಣೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಹಿಸಲಾಗಿದೆ. ವಿದೇಶದಿಂದ ಮತ್ತು ಭಾರತದ ಒಳಗಿನ ರಾಜ್ಯಗಳಿಂದ ಈ ಪ್ರದೇಶಗಳಿಗೆ ಪ್ರಯಾಣಿಸುವ ಯಾತ್ರಿಗಳಿಗೆ ಸಂಕಷ್ಟದ ಸಮಯವಾಗಿದೆ.