ಮಂಗಳೂರು, ಮೇ 08: ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್ ಮತ್ತು ಇನ್ನಿತರ ಕೋಮು ದ್ವೇಷ ಚಟುವಟಿಗೆಗಳ ಸಂಬಂಧಿತ ವಿಚಾರಗಳ ಬಗ್ಗೆ ಕಟ್ಟು ನಿಟ್ಟಿನ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.
ಇತೀಚಿನ ದಿನಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಕೋಮು ಪ್ರಚೋದಕ ಪೋಸ್ಟ್ ಗಳು ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ಪ್ ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ರೀತಿಯ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಒಂದು ವಾರದಲ್ಲಿ 30 ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಕ್ಕೆ ಸಂಬಂಧಪಟ್ಟ ಪ್ರಕರಣಗಳ ದಾಖಲು
ಕೋಮು ದ್ವೇಷ, ಸುಳ್ಳು ವದಂತಿ, ಬೆದರಿಕೆಯ ಸಂದೇಶಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಕೇವಲ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ದಾಖಲಾದ ಎಲ್ಲಾ ಸೋಶಿಯಲ್ ಮೀಡಿಯಾ ಸಂಬಂಧಿತ ಪ್ರಕರಣಗಳನ್ನು ಸೆನ್ ಕ್ರೈಂ ಪೊಲೀಸ್ ತಂಡ ತನಿಖೆ ನಡೆಸಲಿದೆ. ಈಗಾಗಲೇ ಕೆಲವರ ತನಿಖೆ ನಡೆಸಲಾಗಿದ್ದು, ಉಳಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ವಿದೇಶದಲ್ಲಿ ಕುಳಿತು ಪೋಸ್ಟ್ ಹಾಕಿದರೂ ಹುಡುಕಲಾಗುವುದು. ಕೆಲವರು ನಕಲಿ ಪ್ರೊಫೈಲ್ ಅಥವಾ ವಿದೇಶದಲ್ಲಿ ನೊಂದಾಯಿತ ಖಾತೆಗಳ ಮೂಲಕ ಸುಳ್ಳು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಇಂತಹ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಅವರಲ್ಲಿ ಇದೆ ಆದರೆ ಎಲ್ಲೇ ಕೂತು ಅಕೌಂಟ್ ರಚಿಸಿದರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು.
ಆದ್ದರಿಂದ ಯುವಜನತೆ ತಮ್ಮ ಭವಿಷ್ಯ ಮತ್ತು ಉದ್ಯೋಗವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೊದಲು ತುಂಬಾ ಎಚ್ಚರ ವಹಿಸಬೇಕು ಎಂದು ಆಯುಕ್ತರು ಸಲಹೆ ನೀಡಿದ್ದಾರೆ. ದ್ವೇಷಪೂರಿತ ಸಂದೇಶಗಳು ಕಂಡಲ್ಲಿ ಅದನ್ನು ಮುಂದಕ್ಕೆ ಫಾರ್ವರ್ಡ್ ಮಾಡುವ ಬದಲು ಸನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣ ತೀವ್ರ ಏರಿಕೆ ಕಂಡು ಬಂದಿದ್ದು , ಪೊಲೀಸ್ ಇಲಾಖೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ತಪ್ಪಿತಸ್ಥರಿಂದ ಮುಚ್ಚಳಿಕೆಗೆ ಸಹಿ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 126 ಮತ್ತು 129ರ ಅಡಿಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪಿತಸ್ಥರಿಂದ ಮುಚ್ಚಳಿಕೆಗೆ ಸಹಿ ಹಾಕಿಸಲಾಗುತ್ತದೆ ಮತ್ತು ಅವರು ನಿರ್ದಿಷ್ಟಾವಧಿಗೆ ಉತ್ತಮ ನಡವಳಿಕೆಗ ಬಾಂಡ್ ಮೇಲೆ ಸಹಿ ಮಾಡಬೇಕಾಗುತ್ತದೆ. ಒಂದುವೇಳೆ ಈ ಅವಧಿಯಲ್ಲಿ ಯಾವುದಾದರೂ ಪ್ರಕರಣ ಪುನರಾವರ್ತನೆ ಮಾಡಿದರೆ ಮತ್ತೊಮ್ಮೆ ದಂಡ ಅಥವಾ ಜೈಲು ಶಿಕ್ಷೆಗೆ ಒಳಗಾಗುತ್ತಾರೆ.
ಮಂಗಳೂರನ್ನು ಶಾಂತ, ಕಾನೂನು ಬದ್ಧ ಹಾಗೂ ಏಕತೆಯ ನಗರವನ್ನಾಗಿಸುವುದು ನಮ್ಮೆಲ್ಲರ ಧ್ಯೇಯ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಬಳಸುವ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಾಧ ಮತ್ತು ಶಿಕ್ಷೆಗಳ ವಿವರ
1. ಗುಂಪುಗಳ ನಡುವೆ ದ್ವೇಷ ಉಂಟು ಮಾಡುವುದು, ಕಲಂ 196 ಬಿಎನ್ಎಸ್ ಅಡಿಯಲ್ಲಿ - 5 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
2. ಗಲಭೆ ಅಥವಾ ಹಿಂಸೆಗೆ ಪ್ರಚೋದನೆ ನೀಡುವುದು, ಕಲಂ 192 ಬಿಎನ್ಎಸ್ ಅಡಿಯಲ್ಲಿ - 6 ತಿಂಗಳವರೆಗೆ ಜೈಲು ಅಥವಾ ದಂಡ ಇಲ್ಲವೇ ಎರಡೂ.
3. ವ್ಯಕ್ತಿಗಳ ಬೆದರಿಸುವುದು ಕಲಂ 351(1) ಬಿಎನ್ಎಸ್ ಅಡಿಯಲ್ಲಿ - 7 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
4. ಆನ್ಲೈನ್ ಮೂಲಕ ದ್ವೇಷ ಭಾಷಣ ಕಲಂ 351(1)(ಎ) ಬಿಎನ್ಎಸ್ - 2 ವರ್ಷಗಳವರೆಗೆ ಜೈಲು ಅಥವಾ ದಂಡ ಇಲ್ಲವೇ ಎರಡೂ.
5. ಸುಳ್ಳು ಮಾಹಿತಿ ಅಥವಾ ಫೇಕ್ ನ್ಯೂಸ್ ಹರಡುವುದು ಕಲಂಗಳು 353(1) ಮತ್ತು 353(2), ಬಿಎನ್ಎಸ್ ಅಡಿಯಲ್ಲಿ - ಶಿಕ್ಷೆ 3 ವರ್ಷಗಳವರೆಗೆ ಜೈಲು ಅಥವಾ ದಂಡ ಇಲ್ಲವೇ ಎರಡೂ.
ಈ ಮೂಲಕ ದಕ್ಷಿಣ ಕನ್ನಡದಲ್ಲಿ ಶಾಂತಿಯನ್ನು ಕಾಪಾಡಲು ಮಂಗಳೂರು ಪೊಲೀಸ್ ಆಯುಕ್ತರ ತಂಡ ಸುತ್ತೋಲೆಯನ್ನು ಹೊರಡಿಸಿದೆ. ಈಗಾಗಲೇ ಮಂಗಳೂರು ನಗರದಲ್ಲಿ ರಾತ್ರಿ 9.00 ರ ನಂತರ ಜನರ ಚಲನವಲನ ಕಡಿಮೆ ಇರುವುದರಿಂದ ವ್ಯಾಪಾರ ವಹಿವಾಟು ಕುಸಿದಿದೆ ಎಂದು ತಿಳಿದು ಬಂದಿದೆ.