ಮಂಗಳೂರು, ಮೇ 08: 'ಆಪರೇಷನ್ ಸಿಂಧೂರ್' ನಡೆದ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜೆಲ್ಲೆಗಳನ್ನು ಒಳಗೊಂಡಂತೆ 324 ಕಿ.ಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮಂಗಳೂರು, ಮಲ್ಪೆ, ಕಾರವಾರ, ಕುಮಟಾ, ಭಟ್ಕಳ, ಹೆಜಮಾಡಿ, ಹೊನ್ನಾವರ, ಬೇಲೆಕೇರಿ ಮತ್ತು ಗಂಗೊಳ್ಳಿಯಲ್ಲಿ ಸಿಎಸ್ಪಿ ಕೇಂದ್ರಗಳು ಸೇರಿವೆ.
ಮೇ 07 ರ ಬುಧವಾರ ಮುಂಜಾನೆ ಪಾಕಿಸ್ತಾನದಲ್ಲಿ ನೆಲೆಸಿರುವ 9 ಉಗ್ರರ ಶಿಬಿರಗಳಿಗೆ ಭಾರತ ದಾಳಿ ನಡೆಸಿ ಧ್ವಂಸ ಮಾಡಿದ ಪರಿಣಾಮ ಎಚ್ಚರಿಕೆಯ ಕ್ರಮವಾಗಿ ರಾಜ್ಯದ ಕರಾವಳಿಯಲ್ಲಿ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಘೋಷಣೆಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ.
ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 340 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅದರಲ್ಲಿ 180 ಸಿಬ್ಬಂದಿಯನ್ನು ಕರಾವಳಿ ನಿಯಂತ್ರಣ ಪಡೆಗೆ ಸೇರಿಸಲಾಗಿದೆ. 13 ದೋಣಿಗಳು ಮತ್ತು ಜೆಟ್ ಸ್ಕೀ ಗಳನ್ನು ಬಳಸಿಕೊಂಡು 24/7 ಕಣ್ಗಾವಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕರಾವಳಿ ಭದ್ರತಾ ಎಸ್ಪಿ ಮಿಥುನ್ ಕುಮಾರ್ ಎಂಬ ಮಾಹಿತಿ ಮಾಧ್ಯಮಗಳಿಗೆ ನೀಡಿದ್ದಾರೆ.
ಕರಾವಳಿ ಕಾವಲು ಪಡೆ ಹಡಗುಗಳು ಈಗಾಗಲೇ 24x7 ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು, ವಿದೇಶಿ ಹಡಗುಗಳ ಮೇಲೆ ಹೆಚ್ಚಿನ ಕಣ್ಗಾವಲು ನಡೆಸುತ್ತಿವೆ. ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಕರಾವಳಿ ಭದ್ರತಾ ಪೊಲೀಸರು, ಕರಾವಳಿ ಭಾಗದ ಮತ್ತು ಆಳ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದಾರೆ.
ಸಮುದ್ರದ ಆಳಕ್ಕೆ ಮೀನು ಹಿಡಿಯಲು ಹೋಗುವ ದೋಣಿ ಮತ್ತು ಮೀನುಗಾರರಿಗೆ ಕೆಲವು ನಿರ್ಬಂಧಗಳನ್ನು ಕೂಡ ಹೇರಲಾಗಿದ್ದು, ಕರಾವಳಿಯಲ್ಲಿ ಭದ್ರತೆಯಲ್ಲಿ ಯಾವುದೇ ಲೋಪದೋಷವಾಗದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ.