20 June 2025 | Join group

ದೇಶದ ರಕ್ಷಣೆಯ ಕರೆಗೆ ಹನಿಮೂನ್ ರದ್ದು ಮಾಡಿ ಸೇವೆಗೆ ತೆರಳಿದ ಯೋಧ, ಸನ್ಮಾನ ಮಾಡಿ, ಗೆದ್ದು ಬಾ ಎಂದು ಹಾರೈಸಿ ಕಳುಹಿಸಿದ ಜನ

  • 10 May 2025 05:55:49 PM

ಕಾರವಾರ, ಮೇ, 10: ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ನಡೆಸಿದ ಬಳಿಕ ಭಾರತ ಮತ್ತು ಭಾರತೀಯ ಸೇನೆಗಳ ನಡುವೆ ಯುದ್ಧ ಆರಂಭವಾಗಿದೆ.

 

ಯಾವುದೇ ದೇಶದಲ್ಲಿ ಯುದ್ಧದ ವಾತಾವರಣದ ಎದುರಾದರೆ ಅಂತಹ ಸಂಧರ್ಭದಲ್ಲಿ ದೇಶದಾದ್ಯಂತ ರಜೆಯಲ್ಲಿರುವ ಯೋಧರನ್ನು ಮರಳಿ ಕೆಲಸಕ್ಕೆ ಕರೆಯಲಾಗುತ್ತದೆ. ಯೋಧರು ತಮ್ಮ ರಜೆಗಳನ್ನು ಮೊಟಕುಗೊಳಿಸಿ ಮತ್ತೆ ದೇಶ ಕಾಯುವ ಕೆಲಸಕ್ಕೆ ತೊಡಗಿಸಿಕೊಳ್ಳಾಗುತ್ತದೆ.

 

ಉತ್ತರ ಕನ್ನಡ ಜಿಲ್ಲೆಯ ಯೋಧನೊಬ್ಬ ದೇಶದ ಕರೆಗೆ ಹನಿಮೂನ್‌ ಮೊಟಕಗೊಳಿಸಿ ಸೇವೆಗೆ ತೆರಲಬೇಕಾಗದ ಪರಿಸ್ಥಿತಿ ಬಂದೊದಗಿದೆ. ಮದುವೆಯಾಗಿ ಕೇವಲ 9 ದಿನಕ್ಕೆ ತನ್ನ ಪತ್ನಿಯನ್ನು ಬಿಟ್ಟು ಯುದ್ಧಕ್ಕಾಗಿ ಛತ್ತೀಸಗಢದ (Chhattisgarh) ತನ್ನ ಬೆಟಾಲಿಯನ್‌ಗೆ ತೆರಳಿದ್ದಾರೆ.

 

ಅವರೇ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಯೋಧ ಜಯಂತ್. ಹನಿಮೂನ್ ಗೆಂದು ಹೊರಟಿದ್ದ ಜಯಂತ್ ಅದನ್ನು ಅರ್ಧದಲ್ಲೇ ರದ್ದುಪಡಿಸಿ ದೇಶ ಸೇವೆಗೆ ಕರ್ತವ್ಯಕ್ಕೆ ಹೊರಟಿದ್ದಾರೆ.

 

ಮೇ 1 ರಂದು ಮದುವೆಯಾಗಿ ಜಯಂತ್‌ ದಂಪತಿ ಊಟಿಗೆ ಹನಿಮೂನ್‌ಗೆ ತೆರಳಿದ್ದರು. ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿತು. ದೇಶ ಸೇವೆಯೇ ಈಶ ಸೇವೆ ಎಂಬ ಗಾದೆ ಮಾತಿನಂತೆ ಸೈನ್ಯದಿಂದ ಕರೆಬಂದ ಕೂಡಲೇ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಯೋಧ ಹಾಜರಾಗಿದ್ದಾರೆ.

 

ಸಿದ್ದಾಪುರದ ದೇಶಭಕ್ತ ಜನ ಯೋಧನಿಗೆ ಸನ್ಮಾನ ಮಾಡಿ, ಗೆದ್ದು ಬಾ ಎಂದು ಹಾರೈಸಿ ಕಳುಹಿಸಿದ್ದಾರೆ. ಸಿಆರ್‌ಪಿಎಫ್‌ನಲ್ಲಿ (CRPF) ಛತ್ತೀಸಗಢನಲ್ಲಿ ಜಯಂತ್‌ ಸೇವೆ ಸಲ್ಲಿಸುತ್ತಿದ್ದಾರೆ.