ಬಂಟ್ವಾಳ, ಮೇ 12: ಆಭರಣ ಖರೀದಿಸಿ ದೇವರಿಗೆ ಪೂಜೆ ಮಾಡಿಸುವುದು ಸರ್ವೇಸಾಮಾನ್ಯ. ಆದರೆ ಪೂಜೆ ಮಾಡಿಸಲು ತೆಗೆದುಕೊಂಡು ಹೋದ ಆಭರಣ ಕಳವಾಗಿರುವ ಘಟನೆ ಪೊಳಲಿಯಲ್ಲಿ ನಡೆದಿದೆ.
ತನ್ನ ಮಗನ ಮದುವೆಗೆಂದು ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಬಂಗಾರವನ್ನು ಖರೀದಿಸಿ, ದೇವಸ್ಥಾನಕ್ಕೆ ಪೂಜೆಗೆಂದು ತೆಗೆದುಕೊಂಡು ಹೋಗಿದ್ದಾರೆ ವ್ಯಕ್ತಿಯೊಬ್ಬರು. ಅರ್ಚಕರು ಪೂಜೆ ಮಾಡಿದ ನಂತರ ಆ ಬಂಗಾರವನ್ನು ಮನೆಯವರ ಬಳಿ ನೀಡಿದ್ದಾರೆ. ಆದರೆ ಸ್ವಲ್ಪ ಹೊತ್ತು ಕಳೆದು ಇವರು ತನ್ನಲ್ಲಿದ್ದ ಬ್ಯಾಗ್ ನೋಡುವಾಗ ಬ್ಯಾಗ್ ನ ಒಳಗೆ ಇದ್ದ ಬಂಗಾರದ ಪೆಟ್ಟಿಗೆ ಕಳವಾಗಿತ್ತು.
ಕರಿಮಣಿ ಸರ ಮತ್ತು ಬಂಗಾರದ ಬಲೆಗಳು ಸೇರಿ ಒಟ್ಟು ರೂ. 7 ಲಕ್ಷ ಬೆಲೆಬಾಳುವ ಬಂಗಾರವಾಗಿತ್ತು ಎಂದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.