18 June 2025 | Join group

ಆಂಧ್ರಪ್ರದೇಶದ ಹಳ್ಳಿಗಳಲ್ಲಿ ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆ ಮನ್ನಾ ಮಾಡಿದ ಪವನ್ ಕಲ್ಯಾಣ್ - ವೀರರಿಗೆ ನಿಜವಾದ ಗೌರವ!

  • 13 May 2025 12:07:37 AM

ಆಂಧ್ರಪ್ರದೇಶ, ಮೇ, 13 : ಆಂಧ್ರಪ್ರದೇಶದ ಉಪಮುಖ್ಯಮತ್ರಿ ಪವನ್ ಕಲ್ಯಾಣ್ ಅವರು ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಒಳಿತಿಗಾಗಿ ಮಹತ್ತರ ನಿರ್ಧಾರವೊಂದನ್ನು ಜಾರಿಗೊಳಿಸಿದ್ದಾರೆ.

 

ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿರುವ ಯೋಧರಿಗೆ ಆಸ್ತಿಯಲ್ಲಿ ತೆರಿಗೆ ವಿನಾಯಿತಿ ಘೋಷಿಸುವ ಮೂಲಕ ಮಹತ್ತರ ಯೋಜನೆ ಒಂದನ್ನು ಜಾರಿಗೆ ತಂದಿದ್ದಾರೆ. ಗ್ರಾಮೀಣ ಆಂಧ್ರದಲ್ಲಿರುವ ಎಲ್ಲಾ ರಕ್ಷಣಾ ಸಿಬ್ಬಂದಿ ಮನೆಗಳಿಗೆ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆ ದೇಶಾದ್ಯಂತ ಸಕ್ರಿಯ ಆಂಧ್ರಪ್ರದೇಶ ಸೈನಿಕರಿಗೆ ಅನ್ವಯವಾಗಲಿದೆ.

 

'ಈ ನಿರ್ಧಾರವು ಸೇನೆ, ನೌಕಾಪಡೆ, ವಾಯುಪಡೆ, ಸಿಆರ್‌ಪಿಎಫ್ ಮತ್ತು ಅರೆಸೈನಿಕ ಪಡೆಗಳಿಗೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ರಾಷ್ಟ್ರಕ್ಕಾಗಿ ಅವರ ಸೇವೆ ಅಮೂಲ್ಯವಾದುದ್ದು. ಸಿಬ್ಬಂದಿ ಅಥವಾ ಅವರ ಸಂಗಾತಿ ವಾಸಿಸುವ ಅಥವಾ ಜಂಟಿಯಾಗಿ ಹೊಂದಿರುವ ಆಸ್ತಿ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ' ಎಂದು ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

 

'ಸೈನಿಕ ಕಲ್ಯಾಣ ನಿರ್ದೇಶಕರ ಶಿಫಾರಸಿನ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ರಾಷ್ಟ್ರದ ರಕ್ಷಕರಿಗೆ ಆಂಧ್ರದ ಗೌರವ ಮತ್ತು ಕೃತಜ್ಞತೆಯನ್ನು ಎತ್ತಿತೋರಿಸುತ್ತದೆ' ಎಂದು ಪೋಸ್ಟಿನಲ್ಲಿ ತಿಳಿಸಿದ್ದಾರೆ.

 

ಈ ನಿರ್ಧಾರ ಕೈಗೊಂಡ ನಂತರ ಪವನ್ ಕಲ್ಯಾಣ್ ಆಪರೇಷನ್ ಸಿಂಧೂರ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. "ಆಪರೇಷನ್ ಸಿಂಧೂರ್ ಭಾರತಕ್ಕೆ ಶೌರ್ಯವನ್ನು ಮರುಸ್ಥಾಪಿಸಿತು" ಎಂದು ಹೇಳುವುದರ ಮೂಲಕ ಪ್ರಧಾನಿ ಮೋದಿಯವರ ದಿಟ್ಟ, ನಿರ್ಣಾಯಕ ನಾಯಕತ್ವದ  ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

 

ಪ್ರತಿಯೊಬ್ಬ ಸೈನಿಕನಿಗೂ ನಮಸ್ಕಾರ, ಮತ್ತು ಅವರೊಂದಿಗೆ ನಿಂತ ನಾಯಕನಿಗೆ ನಮಸ್ಕಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಪವನ್ ಕಲ್ಯಾಣ್ ರವರ ಈ ನಿರ್ಧಾರಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.