08 June 2025 | Join group

ಇಂದು ಭಯೋತ್ಪಾದಕರಿಗೆ ಗೊತ್ತಾಗಿದೆ - 'ಸಿಂಧೂರ' ತೆಗೆಯುವುದರ ಪರಿಣಾಮ ಎಷ್ಟು ಭೀಕರ! - ಪ್ರಧಾನಿ ಮೋದಿ

  • 13 May 2025 10:10:31 AM

ನವದೆಹಲಿ, ಮೇ 13 : ಪಾಕಿಸ್ತಾನದ ವಿರುದ್ಧ ಭಾರತ ದಾಳಿ ಮಾಡಿ ಪಾಕಿಸ್ತಾನದ ಪ್ರಮುಖ ಪ್ರದೇಶಗಳಿಗೆ, ವಾಯುನೆಲೆ, ಬಂದರ್ ಮತ್ತು ಇನ್ನಿತ್ತರ ಪ್ರದೇಶಗಳನ್ನ ಪುಡಿ ಮಾಡಿದ ನಂತರ ಹೆದರಿದ ಪಾಕಿಸ್ತಾನ ಅಮೇರಿಕಾದ ನೆರವಿಗೆ ಅಂಗಲಾಚಿತ್ತು. ಅಮೇರಿಕಾ ಭಾರತವನ್ನು ಬೇಡಿಕೊಂಡ ಪರಿಣಾಮ ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು.

 

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದಲ್ಲಿ ನೆಲೆಸಿರುವ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಭೀಕರತೆ ಎಷ್ಟಿತ್ತೆಂದರೆ, ಇಡೀ ವಿಶ್ವವೇ ಭಾರತದ ಸೈನ್ಯ ಶಕ್ತಿ ಬಗ್ಗೆ ತಿರುಗಿ ನೋಡುವಂತಾಗಿದೆ.

 

ಕದನ ವಿರಾಮದ ನಂತರ ನಿನ್ನೆ ಮೇ 12, 2025 ರಂದು ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.

 

'ನಮ್ಮ ಸೇನಾ ಪಡೆಗಳಿಗೆ, ಗುಪ್ತಚರ ಸಂಸ್ಥೆಗೆ, ವಿಜ್ಞಾನಿಗಳಿಗೆ ನಾನು ನಮಸ್ಕರಿಸುತ್ತೇನೆ. ನಮ್ಮ ಸೇನೆಯನ್ನು ನಾನು ಶ್ಲಾಘಿಸುತ್ತೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯು ಒಂದು ಕ್ರೂರ ಭಯೋತ್ಪಾದಕ ದಾಳಿಯಾಗಿತ್ತು. ಭಯೋತ್ಪಾದಕರು ಧರ್ಮದ ಆಧಾರದ ಮೇಲೆ ಜನರನ್ನು ಕೊಂದರು. ಇದು ನನಗೆ ವೈಯಕ್ತಿಕ ನೋವನ್ನು ಉಂಟು ಮಾಡಿತ್ತು. ಈ ದಾಳಿಯ ನಂತರ, ಇಡೀ ರಾಷ್ಟ್ರವು ಒಂದೇ ಧ್ವನಿಯಲ್ಲಿ ಮಾತನಾಡಿತು'.

 

'ಮೇ 6 ಮತ್ತು 7 ರಂದು ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದವು. ನಾವು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿದ್ದೇವೆ. ಪಾಕಿಸ್ತಾನ ಅದನ್ನು ಎಂದಿಗೂ ದಾಳಿಯನ್ನು ಊಹಿಸಿರಲಿಲ್ಲ. 'ಸಿಂಧೂರ' ತೆಗೆಯುವುದರ ಪರಿಣಾಮ ಏನೆಂದು ಭಯೋತ್ಪಾದಕರಿಗೆ ತಿಳಿದಿದೆ'.

 

ಭಾರತೀಯ ಕ್ಷಿಪಣಿಗಳು, ಡ್ರೋನ್‌ಗಳು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದಾಗ, ಭಯೋತ್ಪಾದಕರು ನೆಲಕಚ್ಚಿದರು. ಬಹವಾಲ್ಪುರ್, ಮುರಿಡ್ಕೆ ಜಾಗತಿಕ ಭಯೋತ್ಪಾದನಾ ವಿಶ್ವವಿದ್ಯಾಲಯಗಳು. 9/11 ಹಾಗೂ ಲಂಡನ್ ಟ್ಯೂಬ್ ಬಾಂಬ್ ದಾಳಿ, ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಗಳು, ಎಲ್ಲವೂ ಈ ಸ್ಥಳಗಳೊಂದಿಗೆ ಸಂಪರ್ಕ ಹೊಂದಿದ್ದವು.

 

'ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನಾ ದಾಳಿಗೆ 100 ಕ್ಕಿಂತ ಹೆಚ್ಚು ಭಯೋತ್ಪಾದಕರು ಬಲಿಯಾಗಿದ್ದಾರೆ. ಭಾರತ ಭಯೋತ್ಪಾದಕ ಪ್ರಮುಖ ಕೇಂದ್ರವನ್ನು ಧ್ವಂಸಗೊಳಿಸಿದೆ. ಭಯೋತ್ಪಾದಕ ಶಿಬಿರಗಳ ಮೇಲೆ ನಾವು ನಡೆಸಿದ ದಾಳಿಯಿಂದ ಪಾಕಿಸ್ತಾನ ನಡುಗಿತು. ನಮ್ಮೊಂದಿಗೆ ಸಹಕರಿಸುವ ಬದಲು, ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಅದು ನಮ್ಮ ಶಾಲೆ, ಕಾಲೇಜುಗಳು, ಗುರುದ್ವಾರಗಳು, ದೇವಾಲಯಗಳು, ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಆದರೆ ಪಾಕಿಸ್ತಾನದ ಪ್ರಮುಖ ಆಸ್ತಿಗಳನ್ನು ನಾವು ನಾಶಪಡಿಸಿದ್ದೇವೆ'.

 

'ಪಾಕಿಸ್ತಾನದ ಹೃದಯಭಾಗದ ಮೇಲೆ ನಾವು ದಾಳಿ ನಡೆಸಿದ್ದೇವೆ. ಭಾರತ ಪಾಕಿಸ್ತಾನದ ಮೇಲೆ ಪ್ರತೀಕಾರದ ದಾಳಿ ನಡೆಸಿದ ನಂತರ, ಅದು ಅಂತರರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಕೋರಲು ಪ್ರಾರಂಭಿಸಿತು. ಮೇ 10 ರಂದು, ಪಾಕಿಸ್ತಾನಿ ಡಿಜಿಎಂಒಗಳು ನಮ್ಮನ್ನು ತಲುಪಿದರು. ಆ ಹೊತ್ತಿಗೆ ನಾವು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿದ್ದೆವು'.

 

'ಪಾಕಿಸ್ತಾನಿ ಭಯೋತ್ಪಾದಕರ ಮೂಲಸೌಕರ್ಯ ಮತ್ತು ಮಿಲಿಟರಿ ಮೇಲಿನ ನಮ್ಮ ದಾಳಿ ಕೇವಲ ವಿರಾಮವಷ್ಟೇ. ಪಾಕಿಸ್ತಾನದಿಂದ ಯಾವುದೇ ಪರಮಾಣು ಬೆದರಿಕೆಗೆ ಭಾರತ ಹೆದರುವುದಿಲ್ಲ' ಎಂದು ಸ್ಪಷ್ಟ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು.

 

'ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಆಡಳಿತದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪಾಕಿಸ್ತಾನಿ ಭಯೋತ್ಪಾದಕರ ಸರ್ಕಾರಿ ಅಂತ್ಯಕ್ರಿಯೆಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ಉಪಸ್ಥಿತಿಯಲ್ಲಿದ್ದರು' ಎಂದು ಪಾಕಿಸ್ತಾನದ ದುರ್ಗತಿಯನ್ನು ತಿಳಿಸಿದರು

 

ಹೊಸ ಯುಗದ ಯುದ್ಧದಲ್ಲಿ ನಾವು ನಮ್ಮನ್ನು ಸಾಬೀತುಪಡಿಸಿದ್ದೇವೆ. ಹೊಸ ಯುಗದ ಯುದ್ಧದಲ್ಲಿ ನಾವು ನಮ್ಮ ನಿರ್ಮಿತ ಭಾರತ ರಕ್ಷಣಾ ಉಪಕರಣಗಳನ್ನು ಬಲಿಷ್ಠವೆಂದೇ ಸಾಬೀತುಪಡಿಸಿದ್ದೇವೆ. ಇದು ಯುದ್ಧದ ಯುಗವಲ್ಲ, ಆದರೆ ಈ ಯುಗ ಭಯೋತ್ಪಾದನೆಯ ಯುಗವೂ ಅಲ್ಲ, ಭಯೋತ್ಪಾದನೆಯ ಬಗ್ಗೆ ನಮಗೆ ಶೂನ್ಯ ಸಹಿಷ್ಣುತೆ ಇದೆ, ಪಾಕಿಸ್ತಾನ ತನ್ನನ್ನು ತಾನು ಉಳಿಸಿಕೊಳ್ಳಲು ಬಯಸಿದರೆ, ಅದು ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ನಿರ್ವಹಿಸುವುದಿಲ್ಲ.

 

ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ, ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯುವುದಿಲ್ಲ, ಮತ್ತು ನೀರು ಮತ್ತು ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂಬ ದಿಟ್ಟ ಎಚ್ಚರ ನೀಡಿದರು ಪ್ರಧಾನಿ ಮೋದಿ.

 

'ಅಂತರರಾಷ್ಟ್ರೀಯ ಸಮುದಾಯಕ್ಕೆ‌ ನಮ್ಮ ಕಿವಿ ಮಾತು. ನಮ್ಮ ನೀತಿ, ಪಾಕಿಸ್ತಾನದ ಕುರಿತಾದ ಮಾತುಕತೆಗಳು ಇನ್ನು ಏನಿದ್ದರೂ ಭಯೋತ್ಪಾದನೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ' ಎಂಬ ಕರೆ ಕೊಟ್ಟರು.

 

ನಾನು ನಮ್ಮ ಭಾರತೀಯ ಸೇನೆಗೆ ನಮಸ್ಕರಿಸುತ್ತೇನೆ.. ಎಂದು ಹೇಳಿ ತನ್ನ ಐತಿಹಾಸಿಕ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಪ್ರಧಾನಿ ಮೋದಿಯ ಈ ಭಾಷಣ ಇತಿಹಾಸದ ಪುಟಗಳಲ್ಲಿ ಯಾವತ್ತೂ ಇರಲಿದೆ ಎಂದು ಭಾರತದ ಹಲವಾರು ತಜ್ಞರು ಹೇಳಿಕೊಂಡಿದ್ದಾರೆ. ದೇಶ ಮತ್ತು ದೇಶದ ಸೈನ್ಯದ ಸಾಮರ್ಥ್ಯವನ್ನು ಭಾರತದ ಸೈನ್ಯ ಮತ್ತು ಮೋದಿ ನೇತೃತ್ವದ ಸರಕಾರ ಇಡೀ ವಿಶ್ವಕ್ಕೆ ತಿಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.