ಸುಬ್ರಮಣ್ಯ, ಮೇ 14: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ಕಳಂಕವೊಂದು ಬಂದಿದೆ. ಶ್ರೀ ಕ್ಷೇತ್ರದ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರ ನೇಮಕವಾಗಿದ್ದು, ಇವರು ಮಾಜಿ ರೌಡಿ ಶೀಟರ್ ಎಂಬ ಆರೋಪ ತೀವ್ರವಾಗಿ ಚರ್ಚೆಗೆ ಗ್ರಾಸವಾಗಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ಹರೀಶ್ ಇಂಜಾಡಿರವರಿಗೆ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಅಧ್ಯಕ್ಷ ಸ್ಥಾನ ಸಿಕ್ಕಿದ ಬೆನ್ನಲ್ಲೇ ಇವರ ಮೇಲಿದ್ದ ಹಲವಾರು ಪ್ರಕರಣಗಳ ಬಗ್ಗೆ ಅತಿಯಾದ ಚರ್ಚೆಗಳು ಎದ್ದಿದೆ. ಪ್ರತಿಷ್ಠಿತ ಕನ್ನಡ ಮಾಧ್ಯಮಗಳಲ್ಲಿ ವರದಿಯಾದಂತೆ ಹರೀಶ್ ಇಂಜಾಡಿ ವಿರುದ್ದ ದೇವಸ್ಥಾನಕ್ಕೆ ಸಂಬಂಧಪಟ್ಟ ಪ್ರಕರಣಗಳು ಇದ್ದು, ನಕಲಿ ಚೆಕ್ ನೀಡಿ ಹಣ್ಣು- ಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ಮೋಸ ಎಸಗಿದ ಆರೋಪವು ಇದೆ.
ಈ ಪ್ರಕರಣದಲ್ಲಿ ಈತನ ಬಂಧನವೂ ಕೂಡ ಆಗಿತ್ತು ಆದ್ದರಿಂದ ಈತನಿಗೆ ದೇವಸ್ಥಾನದ ಅಧ್ಯಕ್ಷ ಪಟ್ಟ ನೀಡಬಾರದಾಗಿ ಸಾರ್ವಜನಿಕರು ಪತ್ರವನ್ನು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕ ದತ್ತಿ ಸಚಿವ ರಾಮಲಿಂಗ ರೆಡ್ಡಿಗೆ ಸ್ಥಳೀಯರು ಪತ್ರ ಬರೆದು ಈ ರೀತಿಯ ವಿನಂತಿ ಒಂದನ್ನು ಮಾಡಿದ್ದರೂ ಸಹ ಇವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ಟಿರೋದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯನಾಗಿರುವ ಹರೀಶ್ ಹಿಂಜಾಡಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರ ಶಿಫಾರಸಿನ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಉಸ್ತುವಾರಿ ಸಚಿವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ . ಮರಳು ಮಾಫಿಯ ಮತ್ತು ಮರ ಸಾಗಾಟನೆ ಪ್ರಕರಣವು ಕೂಡ ಈತನ ಮೇಲಿದೆ ಎಂದು ಪ್ರತಿಷ್ಠಿತ ಕನ್ನಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಿಜೆಪಿ ಆಕ್ರೋಶ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆಯಾದಾಗ ರೌಡಿಶೀಟರ್ ಎನ್ನುವ ಕಾರಣಕ್ಕಾಗಿ ಗೃಹ ಸಚಿವ ಡಾ.ಪರಮೇಶ್ವರ್, ದಿನೇಶ್ ಗುಂಡೂರಾವ್ ಅಥವಾ ಯಾರೇ ಕಾಂಗ್ರೆಸ್ ನಾಯಕರುಗಳು ಆತನ ಮನೆಗೆ ಭೇಟಿ ನೀಡಿಲ್ಲ ಆದರೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ಮಂಡಳಿಯಲ್ಲಿ ರೌಡಿಶೀಟರ್ ಒಬ್ಬರಿಗೆ ಅಧ್ಯಕ್ಷ ಪಟ್ಟ ನೀಡಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ
'ಸಚಿವರಾದ ದಿನೇಶ್ ಗುಂಡು ರಾವ್ ಅವರ ಶಿಫಾರಿಸಿನ ಮೇರೆಗೆ ಮಾಜಿ ರೌಡಿ ಶೀಟರ್ ಹರೀಶ್ ಇಂಜಾಡಿ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ದೇವಸ್ಥಾನದ ಆಡಳಿತ ಮಂಡಳಿಗೆ ಅನುಭವಿಗಳನ್ನು, ಆಡಳಿತಾತ್ಮಕ ಅನುಭವ ಇರುವವರನ್ನು, ಸಾತ್ವಿಕರನ್ನು ನೇಮಿಸಬೇಕೆ ಹೊರತು, ಕ್ರಿಮಿನಲ್ ಹಿನ್ನೆಲೆ ಇರುವವರನ್ನಲ್ಲ. ಇವರಿಂದ ದೇವಸ್ಥಾನದ ಅಭಿವೃದ್ಧಿಯಾಗಲಿ, ಭಕ್ತಾದಿಗಳಿಗೆ ಸೌಲಭ್ಯವನ್ನಾಗಲಿ, ಸುಧಾರಣೆಗಳನ್ನು ನಿರೀಕ್ಷೆ ಮಾಡುವುದು ಅಸಾಧ್ಯ. ಇಂಜಾಡಿ ಅವರ ನೇಮಕಾತಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದು ಸೂಕ್ತರನ್ನು ನೇಮಿಸಲಿ' ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಲ್ ತನ್ನ ಎಕ್ಸ್ ಪೋಸ್ಟಿನಲ್ಲಿ ಹಂಚಿದ್ದಾರೆ.
ಕಾಂಗ್ರೆಸ್ ಪ್ರತಿಯೇಟು
ಇದಕ್ಕೆ ಪ್ರತಿಯೇಟು ನೀಡಿದ ಕಾಂಗ್ರೆಸ್ 'ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರು ಯಾರಾಗಬೇಕು ಎನ್ನುವುದು ಅಲ್ಲಿನ ಸದಸ್ಯರ ಆಯ್ಕೆಗೆ ಬಿಟ್ಟಿದ್ದು, ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಹೇಗೆ ಸಾಧ್ಯ? ಇಂಥದ್ದೊಂದು ಸಾಮಾನ್ಯ ಜ್ಞಾನ ಇಲ್ಲದ @BJP4Karnataka ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿಕೊಂಡು ಜನರ ದಾರಿ ತಪ್ಪಿಸಲು ಹೊರಟಿದೆ' ಎಂದು ಬರೆದಿದೆ.