08 June 2025 | Join group

ಬಂಟ್ವಾಳ : ಲೋಕಾಯುಕ್ತ ದಾಳಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಇಬ್ಬರು ಖಜಾನ ಸಿಬ್ಬಂದಿ - ದಸ್ತಗಿರಿ

  • 14 May 2025 08:59:00 PM

ಬಂಟ್ವಾಳ, ಮೇ 14 : ಸರಕಾರಿ ಕಚೇರಿಗಳಲ್ಲಿ ಲಂಚದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಂಚ ಎಂದರೆ ನೈತಿಕತೆಯ ಮರಣ ಎನ್ನುತ್ತಾರೆ ವಿದ್ವಾನಿಗಳು. ಆದರೂ ಲಂಚ ಪಡೆಯದೇ ತಮ್ಮ ಪೇಪರ್ ಮುಂದಕ್ಕೆ ಹೋಗಲ್ಲ ಎನ್ನುವ ಮಾತು ಮಾತ್ರ ಬೇಸರ ತರಿಸುವ ಸಂಗತಿ.

 

ಲಂಚ ಕೊಡುವವರ ನೋವು, ಸಂಕಟ, ಹಿಡಿಶಾಪ ಪಡೆದುಕೊಳ್ಳುವವರಿಗೆ ಅರ್ಥ ಆಗದ ಸಮಯದಲ್ಲಿ ಲಂಚಕೋರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಾನವೀಯತೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಸಿಕ್ಕಿ ಬೀಳುವವರು ಕಡಿಮೆ ಆದರೆ ಸಿಕ್ಕಿ ಬೀಳದವರ ಸಂಖ್ಯೆ ಬಹಳ.

 

ಇದೀಗ ಬಂಟ್ವಾಳ ತಾಲೂಕಿನ ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್.ಡಿ.ಎ ಸಿಬ್ಬಂದಿ ಬಸವೇನೆಗೌಡ ಬಿ.ಎನ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಮರಣೋಪದಾನಕ್ಕೆ ಸಂಬಂಧಿಸಿದ್ದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇವರು ಲಂಚ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

 

ಬಂಟ್ವಾಳ ತಾಲೂಕಿನ ಪಂಚಾಯತ್ ಒಂದರಲ್ಲಿ ದೂರುದಾರರ ಗಂಡ ಸೇವೆ ಸಲ್ಲಿಸುತ್ತಿದ್ದು, 2023 ರಲ್ಲಿ ನಿವೃತ್ತಿಯಾಗಿದ್ದರಂತೆ. 2024 ರ ಜೂನ್ ತಿಂಗಳಲ್ಲಿ ಅವರ ಮರಣವಾದ ಕಾರಣ, ಗಂಡನ ಮರಣೋಪದಾನಕ್ಕೆ ಬಂಟ್ವಾಳ ಖಜಾನ ವಿಭಾಗದಲ್ಲಿ ವಿಚಾರಣೆಗೆ ನಡೆಸಿದಾಗ ಆರೋಪಿಗಳಾದ ಭಾಸ್ಕರ್ ಮತ್ತು ಬಸವೇನೆಗೌಡ ಬಿ.ಎನ್ 10 ಸಾವಿರ ರೂಪಾಯಿ ಲಂಚ ಕೇಳಿದ್ದಾರೆಂದು ದೂರುದಾರರು ತಿಳಿಸಿದ್ದಾರೆ.

 

ಇದರಿಂದ ವಿಚಲಿತರಾದ ದೂರುದಾರೆ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ನೇತೃತ್ವದಲ್ಲಿ ಲಂಚ ಪಡೆಯುವಾಗ ಧಿಡೀರ್ ಕಾರ್ಯಾಚರಣೆ ನಡೆಸಿ ಇಬ್ಬರ ಮೇಲೆ ಕೇಸು ದಾಖಲಿಸಿ ಬಂಧಿಸಿದ್ದಾರೆ.

 

ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಸುರೇಶ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಮತ್ತು ಇನ್ನಿತರ ಸಿಬಂದಿಗಳು ಉಪಸ್ಥಿತರಿದ್ದರು.