19 June 2025 | Join group

ನಾನು ಈಗ ರೌಡಿ ಶೀಟರ್ ಅಲ್ಲ, ಸುಬ್ರಮಣ್ಯ ದೇವಸ್ಥಾನಕ್ಕೆ ಯಾವುದೇ ಹಣ ಬಾಕಿ ಇರಿಸಿಕೊಂಡಿಲ್ಲ - ಹರೀಶ್ ಇಂಜಾಡಿ

  • 15 May 2025 01:10:43 AM

ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಹರೀಶ್ ಇಂಜಾಡಿ ಮೇಲೆ ಬಿಜೆಪಿ ಗಂಭೀರ ಆರೋಪವೊಂದನ್ನು ಮಾಡಿತ್ತು. ನೂತನ ಅಧ್ಯಕ್ಷರು ರೌಡಿ ಶೀಟರ್ ಎಂಬ ಪಟ್ಟ ಕಟ್ಟಿತ್ತು. 


ಆದರೆ, ಇದೀಗ ಖುದ್ದು ಹರೀಶ್ ಇಂಜಾಡಿ ‘ ನಾನು ರೌಡಿ ಶೀಟರ್ ಅಲ್ಲ, ಸುಬ್ರಮಣ್ಯ ದೇವಸ್ಥಾನಕ್ಕೆ ಯಾವುದೇ ಹಣ ಬಾಕಿ ಇರಿಸಿಕೊಂಡಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲಿದ್ದ ಆರೋಪವನ್ನು ತಳ್ಳಿ ಹಾಕಿದ್ದಾರೆ. 
 

ರಾಜಕೀಯ ಷಡ್ಯಂತ್ರದಿಂದ ನನ್ನ ಮೇಲೆ ಸುಳ್ಯ ಇನ್ಸ್ಪೆಕ್ಟರ್ ರೌಡಿಶೀಟ್ ಓಪನ್ ಮಾಡಿದ್ದರು. ಆದರೆ 15 ವರ್ಷಗಳ ಹಿಂದೆ ನನ್ನ ಸನ್ನಡತೆ ಗಮನಿಸಿ ರೌಡಿಶೀಟ್ ರದ್ದು ಮಾಡಲಾಗಿದೆ. ಇದಾದ ಬಳಿಕ ನಾನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ.

 

25 ವರ್ಷಗಳ ಹಿಂದೆ ಅಂಗಡಿ ಗುತ್ತಿಗೆ ಪಡೆದಿದ್ದೆ. ಆ ವೇಳೆ ದೇವಸ್ಥಾನಕ್ಕೆ ಹಣ ನೀಡಲು ಬಾಕಿ ಇತ್ತು. ಬಳಿಕ ನನ್ನ ಮೇಲೆ ಚೆಕ್ ಬೌನ್ಸ್ ಪ್ರಕರಣ ಕೂಡ ದಾಖಲಾಗಿತ್ತು. ನನ್ನ ತಪ್ಪನ್ನು ಅರಿತು ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಬಾಕಿ ಕ್ಲೀಯರ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಹರೀಶ್ ಮೇಲೆ ಚೆಕ್ ಬೌನ್ಸ್ ಕೇಸ್ ಬುಕ್ ಆಗಿತ್ತು ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಕನ್ನಡದಲ್ಲಿ ಹರೀಶ್ ಇಂಜಾಡಿ ಹೇಳಿದ ಸ್ಪಷ್ಟೀಕರಣದ ಬಗ್ಗೆ ತಿಳಿಸಲಾಗಿದೆ. 

 

ನಾನು ಅಧ್ಯಕ್ಷನಾಗಿರುವುದನ್ನು ಗಮನಿಸಿ ನನ್ನ ರಾಜಕೀಯ ಮತ್ತು ವ್ಯವಹಾರಿಕ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ನಾನು ಅಧ್ಯಕ್ಷನಾದ್ರೆ ಬಿಜೆಪಿ ಅವಧಿಯಲ್ಲಿ ದೇವಸ್ಥಾನದಲ್ಲಿ ಆದ ಅವ್ಯವಹಾರ ಹೊರಗೆ ಹಾಕ್ತೇನೆ ಎಂಬ ಭಯದಲ್ಲಿ ಇದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2 ರಿಂದ 3 ಕೋಟಿ ರೂ. ಬಾಡಿಗೆ ಬಾಕಿ ಇರಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಿದೆ ಕಿಡಿಕಾರಿದರು ಎಂದು ಪಬ್ಲಿಕ್ ಟಿವಿ ಕನ್ನಡದಲ್ಲಿ ಅವರ ಸಮರ್ಥನೆಯ ಸಂದರ್ಶನವನ್ನು ಬರೆಯಲಾಗಿದೆ.