22 June 2026 |

‘ಕೊಟ್ಟಿಯೂರಿಗೆ ಭೇಟಿ ನೀಡಬೇಡಿ’ ವಿಡಿಯೊಗಳ ಸದ್ದು: ಭಕ್ತರಲ್ಲಿ ಗೊಂದಲ, ಅಸಲಿ ಕಾರಣವೇನು?

  • 10 Jun 2026 01:59:34 AM

ಕೇರಳದ ಕಣ್ಣೂರು ಜಿಲ್ಲೆಯ ದಟ್ಟ ಕಾಡಿನ ಮಧ್ಯೆ ನೆಲೆಸಿರುವ ಕೊಟ್ಟಿಯೂರು ದೇವಾಲಯವು ದಕ್ಷಿಣ ಭಾರತದ ಅತ್ಯಂತ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷ ವೈಶಾಖ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವರ್ಷದಲ್ಲಿ ಕೇವಲ 28 ದಿನಗಳ ಕಾಲ ಮಾತ್ರ ತೆರೆದಿರುವ ಈ ದೇವಾಲಯವು ಕಳೆದ ವರ್ಷವೂ ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸಿತ್ತು.

 

ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ “ಕೊಟ್ಟಿಯೂರಿಗೆ ಭೇಟಿ ನೀಡಬೇಡಿ” ಎಂಬ ಶೀರ್ಷಿಕೆಯ ವಿಡಿಯೊಗಳು ವೈರಲ್ ಆಗುತ್ತಿರುವುದು ಭಕ್ತರಲ್ಲಿ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ.

 

ದೇವಾಲಯದ ಸುತ್ತಲಿನ ಜನಸಂದಣಿ ನಿರ್ವಹಣೆ, ಯಾತ್ರಿಕರ ಅನುಭವಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಈ ವಿವಾದಗಳು ಹೆಚ್ಚಾಗಿವೆ.

 

ಕೆಲವು ಯಾತ್ರಿಕರು, ವಿಶೇಷವಾಗಿ ಕರ್ನಾಟಕದಿಂದ ಭೇಟಿ ನೀಡಿದವರು, ಭಾಷಾ ಅಡೆತಡೆ, ಜನಸಂದಣಿ ನಿರ್ವಹಣೆಯಲ್ಲಿನ ತೊಂದರೆ ಹಾಗೂ ಕೆಲ ಅಧಿಕಾರಿಗಳ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಆದರೆ ಮತ್ತೊಂದೆಡೆ ಅನೇಕ ಭಕ್ತರು ಕೊಟ್ಟಿಯೂರಿನ ಶತಮಾನಗಳ ಆಧ್ಯಾತ್ಮಿಕ ಪರಂಪರೆಯನ್ನು ಸಮರ್ಥಿಸುತ್ತಿದ್ದು, ಯಾತ್ರಿಕರು ತಾಳ್ಮೆ ಮತ್ತು ಭಕ್ತಿಭಾವದಿಂದ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

 

ಅನಿರೀಕ್ಷಿತ ಜನಸಂದಣಿ, ವಿಶೇಷ ದರ್ಶನ ಅಥವಾ ವಿಐಪಿ ಪಾಸ್ ವ್ಯವಸ್ಥೆಯ ಕೊರತೆ ಹಾಗೂ ಕಟ್ಟುನಿಟ್ಟಾದ ಸರತಿ ಸಾಲು ವ್ಯವಸ್ಥೆ ಬಗ್ಗೆ ಕೆಲ ಯಾತ್ರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಾವಲಿ ನದಿಯಲ್ಲಿ ಕೆಲವು ಹೊಸ ಆಚರಣೆಗಳನ್ನು ಪರಿಚಯಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.

 

ಯಾವಾಗ ಭೇಟಿ ನೀಡಿದರೆ ಉತ್ತಮ?

ಸ್ಥಳೀಯರ ಹಾಗೂ ನಿಯಮಿತ ಯಾತ್ರಿಕರ ಪ್ರಕಾರ ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಭೇಟಿ ನೀಡುವುದು ಹೆಚ್ಚು ಅನುಕೂಲಕರ. ವಾರಾಂತ್ಯಗಳಲ್ಲಿ, ವಿಶೇಷವಾಗಿ ಶುಕ್ರವಾರ ಮಧ್ಯಾಹ್ನದಿಂದ ಭಾನುವಾರದವರೆಗೆ, ಕುಟುಂಬಗಳು ಹಾಗೂ ಹೊರ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತದೆ.

 

ಮಧ್ಯಾಹ್ನ 3:00 ರಿಂದ 4:30ರ ನಡುವಿನ ಸಮಯವನ್ನು ದರ್ಶನಕ್ಕಾಗಿ ಸರತಿಯಲ್ಲಿ ನಿಲ್ಲಲು ಸೂಕ್ತ ಸಮಯವೆಂದು ಪರಿಗಣಿಸಲಾಗುತ್ತದೆ. ಈ ವೇಳೆಗೆ ಅನೇಕ ಹಗಲು ಯಾತ್ರಿಕರು ಹಿಂದಿರುಗಲು ಆರಂಭಿಸಿರುವುದರಿಂದ ಹಾಗೂ ರಾತ್ರಿ ವೇಳೆಯ ಜನಸಂದಣಿ ಇನ್ನೂ ಆರಂಭವಾಗದಿರು ರಿಂದ ಸ್ವಲ್ಪ ಅನುಕೂಲಕರ ವಾತಾವರಣ ಇರುತ್ತದೆ.

 

ಮುಂಜಾನೆ ಸಮಯವನ್ನು ಏಕೆ ತಪ್ಪಿಸಬೇಕು?

ಸಾಮಾನ್ಯವಾಗಿ ದೇವಾಲಯ ಆಡಳಿತವು ಮುಂಜಾನೆ ಭೇಟಿ ನೀಡಲು ಸೂಚಿಸುತ್ತದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಬೆಳಿಗ್ಗೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯುವ ದರ್ಶನಕ್ಕಾಗಿ ಕೆಲವರು ಮಧ್ಯರಾತ್ರಿಯ ನಂತರವೇ ಸರತಿ ಸಾಲಿನಲ್ಲಿ ನಿಲ್ಲಲು ಆರಂಭಿಸುತ್ತಾರೆ. ಇದರಿಂದ ದಟ್ಟ ಕಾಡಿನ ಪ್ರದೇಶದಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

 

ಮಹಿಳಾ ಯಾತ್ರಿಕರಿಗೆ ಪ್ರಮುಖ ಮಾಹಿತಿ

ಕೊಟ್ಟಿಯೂರಿನ ಪಾರಂಪರಿಕ ಆಚರಣೆಗಳ ಪ್ರಕಾರ ಅಕ್ಕರೆ ಕೊಟ್ಟಿಯೂರು ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ದಿಷ್ಟ ಅವಧಿಗೆ ಮಾತ್ರ ಅವಕಾಶವಿರುತ್ತದೆ. 2026ರಲ್ಲಿ ಮೇ 30ರ ಮಧ್ಯರಾತ್ರಿಯಿಂದ ಜೂನ್ 20ರ ಮಧ್ಯಾಹ್ನದವರೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ದೇವಾಲಯ ಮೂಲಗಳು ತಿಳಿಸಿವೆ. ಮಹಿಳಾ ಸದಸ್ಯರೊಂದಿಗೆ ಯಾತ್ರೆ ಯೋಜಿಸುತ್ತಿರುವವರು ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.

 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳು ಮತ್ತು ಆರೋಪಗಳ ನಡುವೆಯೂ, ಕೊಟ್ಟಿಯೂರು ದೇವಾಲಯವು ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿಯೇ ಉಳಿದಿದೆ. ಯಾತ್ರಿಕರು ದೇವಾಲಯದ ನಿಯಮಗಳು, ಸಂಪ್ರದಾಯಗಳು ಹಾಗೂ ಜನಸಂದಣಿಯ ಪರಿಸ್ಥಿತಿಯನ್ನು ಮುಂಚಿತವಾಗಿ ತಿಳಿದುಕೊಂಡು ಭೇಟಿ ನೀಡಿದರೆ ಯಾತ್ರೆಯ ಅನುಭವ ಮತ್ತಷ್ಟು ಸುಗಮವಾಗಬಹುದು.