ಮಂಗಳೂರು, ಏಪ್ರಿಲ್ 30 : ನಗರದ ಹೊರವಲಯದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ಹೊರವಲಯದಲ್ಲಿರುವ ಕುಡುಪು ಗ್ರಾಮದಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಕ್ಕಾಗಿ 25 ಕ್ಕೂ ಹೆಚ್ಚು ಜನರ ಗುಂಪೊಂದು ವ್ಯಕ್ತಿಯನ್ನು ಥಳಿಸಿದ ಪರಿಣಾಮ ಕೇರಳ ಮೂಲದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲ್ಲೂಕಿನ ಪುಲ್ಪಲ್ಲಿ ಗ್ರಾಮದ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ.ಈ ಘಟನೆ ಏಪ್ರಿಲ್ 27 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.
"ಕ್ರಿಕೆಟ್ ಆಡುತ್ತಿರುವಾಗ, ಆಟಗಾರರ ಗುಂಪು ಮತ್ತು ಇನ್ನೊಂದು ಸಮುದಾಯದ ಯುವಕನ ನಡುವೆ ಮಾತಿನ ಚಕಮಕಿ ನಡೆದು, ಹಲ್ಲೆಗೆ ಕಾರಣವಾಯಿತು" ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
"ಒಂದು ಘಟನೆ ವರದಿಯಾಗಿದೆ. ಸ್ಥಳೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಗುರುತು ತಿಳಿದಿಲ್ಲದ ವ್ಯಕ್ತಿಯೊಬ್ಬರು 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿದರು. ಕೆಲವೇ ಜನರು ಸೇರಿ ಆತನನ್ನು ಥಳಿಸಿದರು. ನಂತರ, ಆತ ಸಾವನ್ನಪ್ಪಿದನು. ಹೆಚ್ಚಿನ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ" ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, "ಆರಂಭದಲ್ಲಿ, ದೇವಾಲಯದ ಮೈದಾನದ ಬಳಿ ಶವ ಪತ್ತೆಯಾದ ನಂತರ ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಏಪ್ರಿಲ್ 28 ರಂದು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸಾವು ಬಹು ಮೊಂಡನೆಯ ಗಾಯಗಳು ಮತ್ತು ವೈದ್ಯಕೀಯ ಆರೈಕೆಯ ಕೊರತೆಯಿಂದ ಸಂಭವಿಸಿದೆ ಎಂದು ದೃಢಪಡಿಸಲಾಗಿದೆ." ಎಂದರು.
ಯುವಕ ನೀಲಿ ಜೀನ್ಸ್ ಧರಿಸಿದ್ದರೂ ಶರ್ಟ್ ಧರಿಸಿರಲಿಲ್ಲ. ಕುಡಿದ ಮತ್ತಿನಲ್ಲಿ ಅಥವಾ ಜಗಳದಲ್ಲಿ ಬಿದ್ದು ಮಾರಣಾಂತಿಕ ಗಾಯಗಳಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ಹಂತದಲ್ಲಿ ಶಂಕಿಸಿದ್ದರು.ಮೃತನು ದಿನಗೂಲಿ ಕೆಲಸಗಾರ ಎಂದು ವರದಿಯಾಗಿದೆ.
ಏಪ್ರಿಲ್ 30 ರ ರಿಪೋರ್ಟ್ ಪ್ರಕಾರ ಪೊಲೀಸರು ಈಗಾಗಲೇ 20 ಜನರನ್ನು ಬಂಧಿಸಿದ್ದಾರೆ. ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಐದು ಅಥವಾ ಹೆಚ್ಚಿನ ವ್ಯಕ್ತಿಗಳ ಗುಂಪುಗಳಿಂದ ನಡೆದ ಕೊಲೆಗಳನ್ನು ಪರಿಗಣಿಸಿ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 103(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.