13 August 2026 |

ಆಟಿ ಅಮಾವಾಸ್ಯೆ: ಮುಂಜಾನೆ 3 ಗಂಟೆಯಿಂದಲೇ ಕಾರಿಂಜ ಕ್ಷೇತ್ರದತ್ತ ಹರಿದುಬಂದ ಭಕ್ತಸಾಗರ

  • 12 Aug 2026 11:47:03 AM

ಬಂಟ್ವಾಳ: ಆಟಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಂಜಾನೆಯಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಹರಿದುಬಂದಿದೆ.

 

ಮುಂಜಾನೆ 3 ಗಂಟೆಯಿಂದಲೇ ಭಕ್ತರು ತೀರ್ಥಸ್ನಾನಕ್ಕಾಗಿ ಆಗಮಿಸಲು ಆರಂಭಿಸಿದ್ದು, ಬೆಳಗಾಗುತ್ತಿದ್ದಂತೆ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೂರದ ಊರುಗಳಿಂದಲೂ ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ತೀರ್ಥಸ್ನಾನ ನೆರವೇರಿಸಿ ಕಾರಿಂಜೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

 

ಆಟಿ ಅಮಾವಾಸ್ಯೆಯಂದು ಕಾರಿಂಜ ಕ್ಷೇತ್ರದ ತೀರ್ಥಸ್ನಾನಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ ಎಂಬ ನಂಬಿಕೆ ಇದೆ. ಕ್ಷೇತ್ರದ ಗದಾ ತೀರ್ಥಕ್ಕೂ ಪೌರಾಣಿಕ ಹಿನ್ನೆಲೆಯಿದ್ದು, ಭೀಮನು ತನ್ನ ಗದೆಯನ್ನು ನೆಲಕ್ಕೆ ಎಸೆದ ಸ್ಥಳದಲ್ಲಿ ಜಲಾಶಯ ನಿರ್ಮಾಣವಾಯಿತು ಎಂಬ ಐತಿಹ್ಯವಿದೆ.

 

ಕ್ಷೇತ್ರದ ಧಾರ್ಮಿಕ ಹಿನ್ನೆಲೆ ಮತ್ತು ತೀರ್ಥಸ್ನಾನದ ಮಹತ್ವದ ಕಾರಣದಿಂದ ಪ್ರತಿವರ್ಷ ಆಟಿ ಅಮಾವಾಸ್ಯೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾರಿಂಜಕ್ಕೆ ಆಗಮಿಸುತ್ತಾರೆ. ಈ ಬಾರಿಯೂ ಬೆಳಗ್ಗಿನಿಂದಲೇ ಕ್ಷೇತ್ರದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣಗೊಂಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ವಯಂಸೇವಕರು ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದಾರೆ.