ಮಂಗಳೂರು: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಂಗಳೂರು-ದುಬೈ ವಿಮಾನಗಳು ರದ್ದಾಗುತ್ತಿದ್ದು, ಪ್ರಯಾಣಿಕರನ್ನು ಸಂಕಷ್ಟವನ್ನು ಎದುರಿಸಿದ್ದಾರೆ. ಜೂನ್ 16 ರಂದು ಮಂಗಳೂರು-ದುಬೈ ವಿಮಾನ ರದ್ದಾಗಿತ್ತು ಅದಾದ ಬಳಿಕ ಜೂನ್ 17 ರಂದು ನಿಗದಿಯಾಗಿದ್ದ ದುಬೈ-ಮಂಗಳೂರು ಎರಡು ವಿಮಾನಗಳು ರದ್ದಾಗಿದೆ. ಇದರ ಜೊತೆಗೆ ಮಂಗಳೂರಿನಿಂದ ದುಬೈ ವಿಮಾನವನ್ನು ಕೂಡ ಏರ್ ಇಂಡಿಯಾ ಎಕ್ಸ್ಪ್ರೆಸ್ ರದ್ದುಗೊಳಿಸಿದೆ.
ಈ ರದ್ಧತಿಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಮಂಗಳೂರು ಮತ್ತು ಯುಎಇಗೆ ಪ್ರಯಾಣಿಸುವ ಯಾತ್ರಿಗಳ ಪೂರ್ವ ಯೋಜಿತ ಕಾರ್ಯಕ್ರಮಕ್ಕೆ ತೊಂದರೆಯಾಗಿದೆ. ಅನೇಕ ಪ್ರಯಾಣಿಕರು ತಕ್ಷಣದ ಪರ್ಯಾಯಗಳು ವ್ಯವಸ್ಥೆ ಮಾಡದೆ ಇದ್ದುದರಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರು ಮರುಪಾವತಿ ಅಥವಾ ಮರುಹೊಂದಿಸುವಿಕೆ ಮಾಡಲು ಅಧಿಕೃತ ಏರ್ ಇಂಡಿಯಾಎಕ್ಸ್ಪ್ರೆಸ್ ಕಚೇರಿಗೆ ಸಂಪರ್ಕಿಸಲು ಸೂಚಿಸಲಾಗಿದೆ.
ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ನಂತರ, ವಿಮಾನಯಾನ ಕ್ಷೇತ್ರದಲ್ಲಿ ಪ್ರತಿದಿನವೂ ಹಲವು ತೊಂದರೆಗಳು ಮತ್ತು ತುರ್ತು ಸಂದರ್ಭಗಳು ಕಾಣಿಸಿಕೊಂಡುಬರುತ್ತಿವೆ. ಸೌದಿಯಿಂದ ಹಜ್ ಯಾತ್ರಿಕರನ್ನು ಕರೆತರುತ್ತಿದ್ದ ಸೌದಿ ಏರ್ಲೈನ್ಸ್ ವಿಮಾನವು ಲಕ್ನೋ ವಿಮಾನ ನಿಲ್ದಾಣದಲ್ಲಿ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡ ಘಟನೆ, ಅಥವಾ ಬ್ರಿಟಿಷ್ ರಾಯಲ್ ನೇವಿಯ ಎಫ್-35 ಫೈಟರ್ ಜೆಟ್ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ, ಇವೆಲ್ಲವೂ ವಿಮಾನಯಾನ ಕ್ಷೇತ್ರವು ಈಗ ಗೊಂದಲಗಳ ನಡುವೆ ಸಿಲುಕಿರುವಂತಿದೆ.