ಮಂಗಳೂರು: ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣ ನಡೆದು ಕೆಲವು ದಿನಗಳು ಕಳೆದ ನಂತರ ಪ್ರಕರಣವನ್ನು ಎನ್ಐಎ ಗೆ ಒಪ್ಪಿಸಲಾಯಿತು. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪ್ರಕರಣವನ್ನು ಎನ್ಐಗೆ ಒಪ್ಪಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿ ಕೊನೆಗೆ ಬಿಜೆಪಿ ಮುಖಂಡರು ಮತ್ತು ಸುಹಾಸ್ ಶೆಟ್ಟಿ ಪೋಷಕರು ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಕರಣವನ್ನು ಎನ್ಐಎ ಗೆ ಒಪ್ಪಿಸಲು ಬೇಡಿಕೊಂಡಿದ್ದರು.
ಈ ಪ್ರಕರಣ ಕೇಂದ್ರ ಗೃಹ ಸಚಿವರ ಕಚೇರಿಗೆ ತಲುಪಿದ ನಂತರ ಅಮಿತ್ ಷಾ ಪ್ರಕರಣವನ್ನು ಎನ್ಐಗೆ ನೀಡಲು ಒಪ್ಪಿಕೊಂಡಿದ್ದರು. ಅದರಂತೆ ತನಿಖಾ ಪ್ರಕ್ರಿಯೆ ಆರಂಭಗೊಂಡು, ಎನ್ಐಎ ಅಧಿಕಾರಿಗಳು ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ನಡೆಸಿದರು. ಇದೀಗ ಪ್ರಕರಣ ಹೊಸ ತಿರುವೊಂದನ್ನು ಪಡೆದುಕೊಂಡಿದೆ.
ಎನ್ಐಎ ತನಿಖೆಯಲ್ಲಿ ನಿಷೇಧಿತ ಸಂಘಟನೆ ಪಿಎಫ್ಐ ನಂಟು ಇರುವ ಬಗ್ಗೆ ಸ್ಪೋಟಕ ಮಾಹಿತಿ ಹೊರಬಂದಿದೆ. ಪಬ್ಲಿಕ್ ಟಿವಿಯಲ್ಲಿ ವರದಿಯಾದ ಪ್ರಕಾರ, ಹಂತಕರಿಗೆ ವಿದೇಶದಿಂದ ಹಣ ಪಂಡಿಂಗ್ ಆಗಿದೆ ಎಂದು ತಿಳಿದುಬಂದಿದೆ. ದುಬೈ, ಸೌದಿ ಅರೇಬಿಯಾ ಮತ್ತು ಕರಾವಳಿಯ ಕೆಲ ವ್ಯಕ್ತಿಗಳ ಅಕೌಂಟ್ ನಿಂದ ಹಣ ವರ್ಗಾವಣೆಯಾಗಿದೆ ಎಂಬ ವಿಚಾರ ಕೂಡ ಬಹಿರಂಗಗೊಂಡಿದೆ.
ಪೊಲೀಸರು ಆಳವಾದ ತನಿಖಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಇನ್ನೆಷ್ಟು ಜನ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಬೇರೆ ಯಾವೆಲ್ಲ ಅಕೌಂಟ್ ಗಳಿಂದ ಅಥವಾ ಬೇರೆ ಯಾವುದಾದರೂ ಮೂಲಗಳಿಂದ ಹಣ ಅಥವಾ ಇನ್ನಿತರ ಬೆಂಬಲ ಹಂತಕರಿಗೆ ಸಿಕ್ಕಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.