ಮಂಗಳೂರು: ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಹಬ್ಬಗಳ ಆಚರಣೆಗಳಿಗೆ ಸಮಯದ ಮಿತಿ ವಿಧಿಸಿರುವ ಹೊಸ ಆದೇಶದ ಹಿನ್ನೆಲೆಯ ಕಾರಣ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಮತ್ತು ಗೊಂದಲ ಎದ್ದಿದೆ. ವಿಶೇಷವಾಗಿ ಚೌತಿ, ಕೃಷ್ಣಾಷ್ಟಮಿ, ಗಣೇಶೋತ್ಸವದಂತಹ ಹಬ್ಬಗಳಿಗೆ ಸಂಬಂಧಿಸಿದ ರಾತ್ರಿ ಕಾರ್ಯಕ್ರಮಗಳಿಗೆ ಸಮಯ ಮಿತಿಯ ನಿಯಮವನ್ನು ಹಾಕಿರುವುದು ಭಕ್ತ ಸಮುದಾಯದ ಅಭಿವ್ಯಕ್ತಿಗೆ ತಡೆ ತರುವಂತಾಗಿದೆ ಎಂದು ಹೇಳಲಾಗುತ್ತಿದೆ.
ಪೋಲಿಸ್ ಇಲಾಖೆ ಹೊರಡಿಸಿರುವ ಸೂಚನೆಯಂತೆ, ಹಬ್ಬದ ಕಾರ್ಯಕ್ರಮಗಳನ್ನು ರಾತ್ರಿ 11:30 ಗಂಟೆಯೊಳಗೆ ಮುಕ್ತಾಯಗೊಳಿಸಬೇಕೆಂದು ಸೂಚಿಸಲಾಗಿದೆ. ಆದರೆ ಹಿಂದಿನ ಅನೇಕ ವರ್ಷಗಳಿಂದ ಈ ಕಾರ್ಯಕ್ರಮಗಳು ರಾತ್ರಿ 12 ಗಂಟೆ ಮತ್ತು ಅದಕ್ಕೂ ಮಿಕ್ಕಿ ಶಾಂತಿಯುತವಾಗಿ ನಡೆಯುತ್ತಾ ಬಂದಿವೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಅದರಲ್ಲೂ, ಮಂಗಳೂರಿನಲ್ಲಿ ದಸರಾ ಸಂದರ್ಭದಲ್ಲಿ ಬೆಳಗ್ಗಿನವರೆಗೂ ನಡೆಯುವ ಮೆರವಣಿಗೆ ಪ್ರಸಿದ್ಧವಾದುದು. "ಈ ನಿಯಮ ಹೀಗೆಯೇ ಮುಂದುವರಿದರೆ ಮಂಗಳೂರಿನ ದಸರಾ ಮೆರವಣಿಗೆಯನ್ನೂ ನಿಲ್ಲಿಸಬೇಕಾಗುತ್ತದೆ" ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.