02 August 2025 | Join group

ಬಂಟ್ವಾಳದ ಮಣಿನಾಲ್ಕೂರಿನಲ್ಲಿ ಅಡಿಕೆ ಕದ್ದ ಕಳ್ಳನ ಬಂಧನ: 2.24 ಲಕ್ಷ ರೂಪಾಯಿ ವಶಕ್ಕೆ

  • 01 Aug 2025 12:56:33 AM

ಬಂಟ್ವಾಳ: ಕಳೆದ ಜುಲೈ 3 ರಿಂದ 22 ರ ನಡುವೆ ಕಳ್ಳತನ ನಡೆದಿದೆ ಎಂದು ಜುಲೈ 23 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಂಜೂರಿನ ಮನೆಯಿಂದ ಮೂರು ವಾರಗಳ ಅವಧಿಯಲ್ಲಿ 45 ಚೀಲ ಒಣಗಿದ ಅಡಿಕೆ ನಾಪತ್ತೆಯಾಗಿದ್ದು, ಅದರ ಬೆಲೆ ಸುಮಾರು 2.2 ಲಕ್ಷ ರೂಪಾಯಿಯಾಗಿತ್ತು.

 

ಪ್ರಕರಣವನ್ನು ಬೆನ್ನತ್ತಿದ ಪೊಲೀಸರು, ಅಡಿಕೆ ಕಳ್ಳನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಯದ ಪೈಚಾರು ಗ್ರಾಮದ ನಿವಾಸಿ ಸತೀಶ್ (29) ಎಂಬ ಆರೋಪಿಯನ್ನು ಜುಲೈ8 ರಂದು ಬಂಧಿಸಿ, ತೀವ್ರ ತನಿಖೆ ನಡೆಸಿದ್ದರು. ನಿರಂತರ ವಿಚಾರಣೆಯ ನಂತರ, ಸತೀಶ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

 

ತನಿಖೆಯ ಸಂದರ್ಭದಲ್ಲಿ ಪೊಲೀಸರು, ರೂ. 74 ಸಾವಿರ ಬೆಲೆಬಾಳುವ 15 ಒಣ ಅಡಿಕೆ ಚೀಲ, 70,000 ರೂ. ನಗದು, ಕದ್ದ ಅಡಿಕೆಯನ್ನು ಸಾಗಿಸಲು ಬಳಸಿದ ವಾಹನ ಅಂದಾಜು 80,000 ರೂ. ಮೌಲ್ಯ ಸೇರಿ ಒಟ್ಟು ರೂ. 2,24,000 ರಷ್ಟು ವಶಪಡಿಸಿಕೊಂಡಿದ್ದಾರೆ.

 

ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ ನೇತೃತ್ವದ, ಪಿಎಸ್‌ಐ ಮಂಜುನಾಥ್ ಟಿ, ಎಎಸ್‌ಐ ಜಿನ್ನಪ್ಪ ಗೌಡ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಜೇಶ್, ನಜೀರ್, ಲೋಕೇಶ್, ಪ್ರಶಾಂತ್ ಮತ್ತು ಕಾನ್‌ಸ್ಟೆಬಲ್‌ಗಳಾದ ಮಾರುತಿ ಮತ್ತು ಹನುಮಂತ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವು ಅಪರಾಧಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

 

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 306 ರ ಪ್ರಕಾರ ಅಪರಾಧ ಸಂಖ್ಯೆ 112/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಟ್ವಾಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.