ಮೂಡಬಿದಿರೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದ ವಿವಾದಾತ್ಮಕ ಘಟನೆಯೊಂದರಲ್ಲಿ, ಮಹಿಳಾ ದೂರುದಾರೆಗೆ ಅಶ್ಲೀಲವಾಗಿ ಕರೆಮಾಡಿ ಕಿರುಕುಳ ನೀಡಿದ ಆರೋಪದ ಮೇಲೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಕೊಪ್ಪಳ ಮೂಲದ ಶಾಂತಪ್ಪ ಎಂಬ ಪೊಲೀಸ್ ಸಿಬ್ಬಂದಿ, ಕುಟುಂಬ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ ಮಹಿಳೆಯ ದೂರಿನಲ್ಲಿ ಇರುವ ಫೋನ್ ನಂಬರ್ ಅನ್ನು ಬಳಸಿ, ಅನವಶ್ಯಕವಾಗಿ ಕರೆಮಾಡಿ, ಮೆಸೇಜ್ ಕಳುಹಿಸಿ, ಅಶ್ಲೀಲವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಮಹಿಳೆ ತನ್ನ ಸಹೋದರನೊಂದಿಗೆ ಮೂಡುಬಿದಿರೆ ಠಾಣೆಗೆ ಹಾಜರಾಗಿ, ಶಾಂತಪ್ಪನ ವಿರುದ್ಧ ಕರೆ ದಾಖಲೆ, ಮೆಸೇಜುಗಳು ಹಾಗೂ ಕಾಲ್ ಲಿಸ್ಟ್ಗಳೊಂದಿಗೆ ಅಧಿಕೃತ ದೂರು ನೀಡಿದ್ದಾರೆ.
ಘಟನೆ ಗಂಭೀರ ರೂಪ ಪಡೆದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು ಶಾಂತಪ್ಪನನ್ನು ತಕ್ಷಣ ಅಮಾನತುಗೊಳಿಸಿ, ಘಟನೆ ಕುರಿತು ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ವಿಚಾರಣೆ ಪ್ರಾರಂಭಿಸಲು ಆದೇಶಿಸಿದ್ದಾರೆ.