ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್
ಕರಾವಳಿ ಜಿಲ್ಲೆಗಳಾದ್ಯಂತ ನಿನ್ನೆ ಬಿಸಿಲಿನ ವಾತಾವರಣ, ಒಣಹವೆ ಮುಂದುವರೆದಿತ್ತು. ಉಡುಪಿ ಜಿಲ್ಲೆಯ ಒಂದೆರಡು ಪ್ರದೇಶಗಳಲ್ಲಿ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ. ಸಂಜೆಯ ನಂತರ ಸುಳ್ಯ ತಾಲ್ಲೂಕಿನ ಘಟ್ಟ ಪ್ರದೇಶಗಳಲ್ಲಿ, ಪುತ್ತೂರು ತಾಲ್ಲೂಕಿನಲ್ಲಲ್ಲಿ, ಶಿರಾಡಿ ಸುತ್ತಮುತ್ತ ಪೂರ್ವದ ಮೋಡದ ಸಾಮಾನ್ಯ ಮಳೆ ಬರುವ ಸಾಧ್ಯತೆ ಇದೆ. ಉಡುಪಿ ಜಿಲ್ಲೆಯ ಘಟ್ಟ ಪ್ರದೇಶಗಳ ಕೆಲವೆಡೆ ಸಣ್ಣ ಮಳೆಯ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಆರಂಭದಲ್ಲಿಯೇ ದುರ್ಬಲವಾದರೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯೂ ಕಡಿಮೆ ಆಗಬಹುದು. ಸೆಪ್ಟೆಂಬರ್ 13/14ರಿಂದ ಒಂದು ವಾರ ಅಲ್ಲಲ್ಲಿ ಸಂಜೆ ಮಳೆಯಾಗಬಹುದು.
ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೋಡದ ವಾತಾವರಣ ಇರಲಿದ್ದು, ಆಗುಂಬೆ ಸುತ್ತಮುತ್ತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ ಆಂಧ್ರ ಗಡಿ ಪ್ರದೇಶಗಳ ಒಂದೆರಡು ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಇದೆ.
ಉತ್ತರ ಒಳನಾಡಿನ ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಲ್ಲಿ ಸಂಜೆಯ ನಂತರ ಸಾಮಾನ್ಯ ಗುಡುಗು ಮಳೆಯ ಮುನ್ಸೂಚನೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ, ಕೆಲವೆಡೆ ತುಂತುರು ಮಳೆಯಾಗಬಹುದು.
ಬಂಗಾಳ ಕೊಲ್ಲಿಯ ಉತ್ತರ ಆಂಧ್ರ ಸಮೀಪ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಕಾರಣದಿಂದ ತಮಿಳುನಾಡು, ಆಂಧ್ರದಲ್ಲಿ ಗುಡುಗು ಮಳೆಯ ಮುನ್ಸೂಚನೆ ಇದೆ. ಇದರ ಪರಿಣಾಮ ಉತ್ತರ ಒಳನಾಡು ಮತ್ತು ಹಳೆಮೈಸೂರು ಭಾಗದಲ್ಲಿ ಮಳೆಯಾಗುತ್ತಿದೆ. ಈ ಸುಳಿಗಾಳಿ ಪಶ್ಚಿಮಕ್ಕೆ ಮಹಾರಾಷ್ಟ್ರ ತನಕ ಚಲಿಸುವ ಕಾರಣ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸಾಮಾನ್ಯ ಮಳೆಯಾಗಬಹುದು, ಭಾರಿ ಮಳೆಯ ಮುನ್ಸೂಚನೆ ಇಲ್ಲ.