ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲಗುಡ್ಡೆಯಲ್ಲಿ ಎಸ್ಐಟಿ ತಂಡ ಉತ್ಖನನ ನಡೆಸಿದ ಸಂದರ್ಭದಲ್ಲಿ, 2 ಬುರುಡೆಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿದ್ದವೆಂದು ವರದಿಯಾಗಿತ್ತು.
ಆದರೆ, ಬಂಗ್ಲಗುಡ್ಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬುರುಡೆಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿವೆ ಎಂದು ಬೆಂಗಳೂರು ಪೋಸ್ಟ್ ಮಾಧ್ಯಮ ವರದಿ ಮಾಡಿದೆ.
ಸೆಪ್ಟೆಂಬರ್ 6 ರಂದು ವಿಠ್ಠಲ್ ಗೌಡರವರ ಹೇಳಿಕೆ ಆಧಾರವಾಗಿ ಎಸ್ಐಟಿ ತಂಡ ಮಹಜರ್ ನಡೆಸಿದ ಸಂದರ್ಭದಲ್ಲಿ, ಬಹಳಷ್ಟು ಅವಶೇಷಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ ಮೆಜಿಸ್ಟ್ರೇಟ್ ಮುಂದೆ ಸಾಕ್ಷಿಯಾಗಿ ಪ್ರಸ್ತುತಪಡಿಸಲಾದ ತಲೆಬುರುಡೆಯನ್ನೂ ಈ ಸ್ಥಳದಿಂದಲೇ ವಶಪಡಿಸಿಕೊಳ್ಳಲಾಗಿತ್ತು.
ಬೆಂಗಳೂರು ಪೋಸ್ಟ್ ವರದಿ ಪ್ರಕಾರ, ಕನಿಷ್ಠ ಮೂರು ಮೂಲಗಳಿಂದ ಈ ಮಾಹಿತಿಯನ್ನು ದೃಢಪಡಿಸಲಾಗಿದೆ. ಅವಶೇಷಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಗೃಹ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ಆ ದೃಶ್ಯವನ್ನು “ಯುದ್ಧಭೂಮಿಯಂತೆ” ಎಂದು ಬಣ್ಣಿಸಿದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿ, ಹೆಚ್ಚಿನ ಅಸ್ತಿಪಂಜರಗಳು ಪತ್ತೆಯಾಗಿವೆ ಎಂಬ ಸುದ್ದಿ ಹೊರಬಿದ್ದರೂ, ಇದರ ಸತ್ಯಾಸತ್ಯತೆ ಎಸ್ಐಟಿ ಹಾಗೂ ಸಂಬಂಧಪಟ್ಟ ತಂಡಗಳ ಸಂಪೂರ್ಣ ತನಿಖೆಯ ನಂತರವೇ ಸ್ಪಷ್ಟವಾಗಲಿದೆ.