ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್
ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಒಣಹವೆ ಮುಂದುವರೆದಿತ್ತು.ಸಂಜೆ ಪೂರ್ವ ಬದಿಯ ಮೋಡ ಬರಲು ಆರಂಭವಾಗಿದ್ದು ಸುಳ್ಯ ತಾಲ್ಲೂಕಿನ ಕೆಲವೆಡೆ ತುಂತುರು ಮಳೆಯಾಗಿದೆ. ಒಳನಾಡು ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದ್ದು ಚಿಕ್ಕಬಳ್ಳಾಪುರ ಮೈಸೂರು ಬಿಜಾಪುರ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಮುಂದುವರೆಯಲಿದೆ. ಸಂಜೆಯ ನಂತರ ಪೂರ್ವದ ಮೋಡ ಬರುವ ಕಾರಣ ಘಟ್ಟಪ್ರದೇಶಗಳ ತಪ್ಪಲಿನಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಸೆ 13 ರಿಂದ ಮೋಡದ ವಾತಾವರಣ ಆರಂಭವಾಗಲಿದ್ದು ಅಲ್ಲಲ್ಲಿ ಮಳೆ ಆರಂಭ ಆಗಬಹುದು. 16ರಿಂದ ಸಾಮಾನ್ಯ ಮಳೆಯಾಗಲಿದ್ದು ಕರಾವಳಿಗೆ ಭಾರಿ ಮಳೆಯ ಮುನ್ಸೂಚನೆಗಳಿಲ್ಲ. ಸೆಪ್ಟೆಂಬರ್ ತಿಂಗಳು ಮಳೆ ಕೊರತೆ ಆಗುವ ಸಾಧ್ಯತೆಗಳಿವೆ.
ಮಲೆನಾಡಿನ ಕೊಡಗು ಹಾಸನ ಜಿಲ್ಲೆಗಳಲ್ಲಿ ಇವತ್ತು ಮಳೆ ಕಡಿಮೆ ಆಗಬಹುದು. ಅಲ್ಲಲ್ಲಿ ಮೋಡ ಬರಲಿದ್ದು ಕೆಲವೆಡೆ ತುಂತುರು ಮಳೆಯ ಮುನ್ಸೂಚನೆ ಇದೆ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು ಒಣಹವೆ ಮುಂದುವರೆಯಬಹುದು.
ದಕ್ಷಿಣ ಒಳನಾಡಿನ ಚಾಮರಾಜನಗರ ಮೈಸೂರು ಮಂಡ್ಯ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು - ಗ್ರಾಮಾಂತರ ತುಮಕೂರು (ಪಾವಗಡ ) ಬಳ್ಳಾರಿ ವಿಜಯನಗರ ಜಿಲ್ಲೆಗಳ ಹಲವೆಡೆ ಗುಡುಗು ಮಳೆಯ ಮುನ್ಸೂಚನೆ ಇದೆ.
ಉತ್ತರ ಒಳನಾಡಿನ ಗದಗ ಕೊಪ್ಪಳ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಬಿಜಾಪುರ ಜಿಲ್ಲೆಗಳಲ್ಲಿಯೂ ಗುಡುಗು ಮಳೆಯ ಮುನ್ಸೂಚನೆ ಇದೆ. ನಾಳೆ ಮತ್ತು ನಾಡಿದ್ದು ಉತ್ತರ ಒಳನಾಡಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯಲ್ಲಿ ಒರಿಸ್ಸಾ ಸಮೀಪ ಇರುವ ಮೇಲ್ಮೈ ಸುಳಿಗಾಳಿ ಕಾರಣದಿಂದ ಆಂಧ್ರ ತಮಿಳುನಾಡು ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಸೆ 17 ತನಕ ಮಳೆ ಮುಂದುವರೆಯಬಹುದು.ಸೆ 14 ರಿಂದ ಮಹಾರಾಷ್ಟ್ರದಲ್ಲಿಯೂ ಭಾರಿ ಮಳೆಯ ಮುನ್ಸೂಚನೆ ಇದೆ.