ವಿಶ್ವದ ಮೂರನೇ ಅತೀ ದೊಡ್ಡ ಶಿವ ದೇವರ ಪ್ರತಿಮೆ ಇರುವ ಮುರುಡೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮೂರೂ ದಿಕ್ಕಿನಲ್ಲೂ ಸಮುದ್ರವನ್ನು ಆವರಿಸಿಕೊಂಡಿರುವ ಈ ದೇವಸ್ಥಾನ, ಸುಂದರ ಪ್ರವಾಸಿ ತಾಣವು ಆಗಿದೆ.
ಈ ಹಿಂದೆ ಮುರುಡೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಧರಿಸುವ ವಸ್ತ್ರದ ಮೇಲೆ ಯಾವುದೇ ಕಡ್ಡಾಯವಾದ ನಿಯಮಗಳಿರಲಿಲ್ಲ ಆದರೆ ಇದೀಗ ಮುರುಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಿದ್ದು, ಖಡ್ಡಾಯವಾಗಿ ಧರಿಸಿ ಬರಬೇಕೆಂದು ಆದೇಶಿಸಿದ್ದಾರೆ.
ಹೊಸ ನಿಯಮ ಈ ರೀತಿ ಇದೆ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಸ್ಥಾನದಲ್ಲಿ ಶಿವ ದೇವರ ದರ್ಶನಕ್ಕೆ ಭೇಟಿ ನೀಡುವ ಪುರುಷ ಭಕ್ತರು ಅಂಗಿ, ಧೋತಿ, ಕುರ್ತಾ-ಪೈಜಾಮ್ ಅಥವಾ ಭಾರತೀಯ ಉಡುಗೆ ಧರಿಸಬೇಕು. ಅದೇ ರೀತಿ ಮಹಿಳೆಯರು ಸೀರೆ, ಚೂಡಿದಾರ್ ಅಥವಾ ಇತರ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಮಾತ್ರ ಧರಿಸಬೇಕು ಎಂದು ಆದೇಶ ನೀಡಿದ್ದಾರೆ.
ಈ ನಿಯಮಗಳನ್ನು ಫಲಕಗಳಲ್ಲಿ ನಮೂದಿಸಿ, ದೇವಸ್ಥಾನದ ಹೊರಗಡೆ ಬೋರ್ಡ್ ಗಳನ್ನೂ ಕೂಡ ಹಾಕಲಾಗಿದೆ. ಭಕ್ತರು ಖಡ್ಡಾಯವಾಗಿ ಹೊಸದಾಗಿ ಜಾರಿಯಾದ ವಸ್ತ್ರ ಸಂಹಿತೆಯನ್ನು ಪಾಲಿಸಬೇಕಾಗಿ ಕೋರಿಕೊಳ್ಳಲಾಗಿದೆ.