"ಹಿತ್ತಲಗಿಡ ಮದ್ದಲ್ಲ " ಎಂಬ ಗಾದೆ ಮಾತು ನಾವೆಲ್ಲ ಕೇಳಿದ್ದೇವೆ. ಆದರೆ ನಮ್ಮ ಮನೆಯ ಹಿತ್ತಲ ಗಿಡಗಳೇ ಅದೆಷ್ಟೋ ಔಷಧಿಯ ಗುಣಗಳನ್ನು ಹೊಂದಿವೆ. ಅಂತಹ ಗಿಡಗಳಿಂದಲೇ ನಮ್ಮ ಆರೋಗ್ಯವನ್ನು ಕಾಪಾಡಬಹುದು.
ಶೀತ (ನೆಗಡಿ)
* ಹಾಲಿಗೆ ಸ್ವಲ್ಪ ಅರಶಿನ ಬೆಲ್ಲ ಸೇರಿಸಿ ಕೆಂಪಗೆ ಕಾಯಿಸಿ ಕುಡಿಯಿರಿ.
* ಶುಂಠಿ ರಸದಲ್ಲಿ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ನೆಗಡಿಯ ಕಾಟದಿಂದ ತಪ್ಪಿಸಿಕೊಳ್ಳಬಹುದು.
* ದೊಡ್ಡಪತ್ರೆ, ತುಳಸಿ ಎಲೆಯ ರಸ, ವೀಳ್ಯದೆಲೆಯ ರಸವನ್ನು ಸೇರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ನೆಗಡಿ ಕಡಿಮೆಯಾಗುವುದು.
ಮೊಡವೆಗಳು
* ಸೇಬು ಹಣ್ಣಿನ ತಿರುಳನ್ನು ಅರೆದು ಚೆನ್ನಾಗಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ.
* ಹಾಲಿನ ಕೆನೆಗೆ ಕಡಲೆ ಹಿಟ್ಟು, ಅರಶಿನ, ನಿಂಬೆರಸ ಬೆರೆಸಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದರೊಂದಿಗೆ ಮೊಡವೆಗಳು ದೂರವಾಗುತ್ತವೆ.
* ಕಿತ್ತಳೆ ಹಣ್ಣಿನ ರಸ ಮತ್ತು ಸಿಪ್ಪೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರವಾಗುತ್ತವೆ.
ಹಲ್ಲು ನೋವು
* ಲವಂಗದ ಎಣ್ಣೆಯನ್ನು ಆಗಾಗ ವಸಡುಗಳಿಗೆ ಹಚ್ಚುವುದರಿಂದ ಹಲ್ಲು ನೋವು, ವಸಡಿನ ಬಾಧೆ ದೂರವಾಗುತ್ತದೆ.
* ಹಲ್ಲು ನೋವು ಬಂದ ಕಡೆ ಲವಂಗವನ್ನು ಕಚ್ಚಿ ಇಟ್ಟುಕೊಳ್ಳುವುದರಿಂದ ನೋವು ಶಮನ ಹೊಂದುತ್ತದೆ.
* ಸೀಬೆ ಹಣ್ಣಿನ ಸೇವನೆಯಿಂದ ಹಲ್ಲುಗಳು ಗಟ್ಟಿಗೊಳ್ಳುತ್ತವೆ.
ಕೆಮ್ಮು
* ಅನಾನಸು ಹಣ್ಣನ್ನು ಆಗಾಗ ಸೇವಿಸುವುದರಿಂದ ಗಂಟಲು ನೋವು ಹಾಗೂ ಕೆಮ್ಮು ದೂರವಾಗುತ್ತದೆ.
* ಅಮೃತ ಬಳ್ಳಿಯ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನೆಕ್ಕುವುದರಿಂದ ಕೆಮ್ಮು, ನೆಗಡಿ ದೂರವಾಗುತ್ತದೆ.
* ತುಳಸಿರಸ, ಕರಿಮೆಣಸಿನ ಪುಡಿಯನ್ನು ಬೆರೆಸಿ ಆಗಾಗ ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.
* ಹಸಿ ಮೂಲಂಗಿಯನ್ನು ತುರಿದು ಅದರ ತುರಿಗೆ ಉಪ್ಪು, ನಿಂಬೆರಸ ಸೇರಿಸಿ ತಿನ್ನುವುದರಿಂದ ಕೆಮ್ಮು, ನೆಗಡಿ ದೂರವಾಗುವುದು.
ಗ್ಯಾಸ್ಟ್ರಿಕ್ ಟ್ರಬಲ್
* ಬೆಳ್ಳುಳ್ಳಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಟ್ರಬಲ್ ದೂರವಾಗುತ್ತದೆ.
* ಆಹಾರದಲ್ಲಿ ಶುಂಠಿಯ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರಬಹುದು.
* ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು ಇದರಿಂದ ಗ್ಯಾಸ್ಟ್ರಿಕ್ ತೊಂದರೆ ಉಂಟಾಗುವುದಿಲ್ಲ.
ಬೊಜ್ಜು
* ಖಾಲಿ ಹೊಟ್ಟೆಗೆ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಬೊಜ್ಜು ಕರಗುವುದು.
* ಕರಿಬೇವಿನ ಸೊಪ್ಪಿನ ಪುಡಿಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಬೊಜ್ಜು ಕರಗುವುದು.
* ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಬೊಜ್ಜು ಕರಗುತ್ತದೆ.
* ನಿಂಬೆರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಅನಗತ್ಯ ಕೊಬ್ಬು ನಿವಾರಣೆಯಾಗುತ್ತದೆ.
* ಪ್ರತಿದಿನ ಬೆಳ್ಳುಳ್ಳಿಯ ಸೇವನೆಯಿಂದ ದೇಹದ ಕೊಬ್ಬನ್ನು ನಿವಾರಿಸಿಕೊಳ್ಳಬಹುದು.
* ಹಳೆ ಜೇನುತುಪ್ಪವನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುವುದು.
ಬೆವರು ಗುಳ್ಳೆಗಳು
* ಬೆವರು ಗುಳ್ಳೆಗಳು ಕಾಣಿಸಿಕೊಂಡರೆ ಅಕ್ಕಿ ತೊಳೆದ ನೀರಿನಿಂದ ಗುಳ್ಳೆಗಳು ಇರುವ ಜಾಗವನ್ನು ತೊಳೆಯಬೇಕು. ಹೀಗೆ ಸುಮಾರು 15 ದಿನಗಳ ಕಾಲ ಮಾಡಿದರೆ ಗುಳ್ಳೆಗಳು ಮಾಯವಾಗುತ್ತದೆ.
* ತೆಂಗಿನ ಹಾಲಿನಲ್ಲಿ ಗುಳ್ಳೆಗಳನ್ನು ತೊಳೆಯಬೇಕು ಆಗ ಗುಳ್ಳೆಗಳು ಶಮನವಾಗುತ್ತವೆ.
ತಲೆನೋವು
* ದೊಡ್ಡಪತ್ರೆ ಸೊಪ್ಪು ಮತ್ತು ಒಂದೆರಡು ಹರಳು ಉಪ್ಪು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತಲೆಸುತ್ತು ದೂರವಾಗುತ್ತದೆ.
ಕೂದಲಿನ ಸಮಸ್ಯೆ
* ಕೊಬ್ಬರಿ ಎಣ್ಣೆಗೆ ಮೆಂತ್ಯ ಬೆರೆಸಿ ಚೆನ್ನಾಗಿ ಕಾಯಿಸಿ, ಪ್ರತಿದಿನ ಕೂದಲಿಗೆ ಮೆಂತೆ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ.
* ದಂಟಿನ ಸೊಪ್ಪಿನ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.
* ದಾಸವಾಳದ ಎಲೆಗಳನ್ನು ಅರೆದು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.
* ಎಳ್ಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ.
ಸಣ್ಣಪುಟ್ಟ ರೋಗಗಳಿಗೆಲ್ಲ ವೈದ್ಯರ ಬಳಿ ತೆರಳಿ, ಔಷಧಿಗಳಿಗೆ ನಮ್ಮ ದೇಹವನ್ನು ಹೊಂದಿಸಿಕೊಳ್ಳುವ ಬದಲು, ಮನೆಮದ್ದು ಬಳಸಿ ಆರೋಗ್ಯವಂತರಾಗಲು ಪ್ರಯತ್ನಿಸೋಣ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆಯುವುದು ಉತ್ತಮ.
Authored By: ಸಂಧ್ಯಾ ಪೂಜಾರಿ





