14 June 2026 |

ಕೌಟುಂಬಿಕ ಕಲಹದ ಕರಾಳ ಅಂತ್ಯ: ಇಬ್ಬರು ಪುಟ್ಟ ಮಕ್ಕಳ ಜೀವ ಕಸಿದು ತಾಯಿಯ ಆತ್ಮಹತ್ಯೆ ಯತ್ನ

  • 13 Jun 2026 01:28:34 PM

ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆ­ಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಈ ದುರ್ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿದ್ದು, ಕುಟುಂಬಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಮತ್ತು ಕಲಹಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

 

ಮೈಸೂರಿನ ನಿವಾಸಿ ಅನಿಲ್ ಕುಮಾರ್ ಅವರ ಪತ್ನಿ ಪ್ರಿಯಾಂಕಾ (26) ಈ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಮೂರು ವರ್ಷದ ಧೃತಿ ಹಾಗೂ ಒಂದೂವರೆ ವರ್ಷದ ದಿಶಾ ಎಂಬ ಪುಟ್ಟ ಕಂದಮ್ಮಗಳು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿವೆ. ಮಕ್ಕಳ ಸಾವಿನ ಬಳಿಕ ಪ್ರಿಯಾಂಕಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ವರದಿಗಳ ಪ್ರಕಾರ, ಕೌಟುಂಬಿಕ ಕಾರಣದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. "ಗಂಡ-ಹೆಂಡತಿ ಜಗಳ ಏನೇ ಇರಲಿ, ಪ್ರಪಂಚ ಏನೆಂದೇ ತಿಳಿಯದ ಆ ಹಸುಗೂಸುಗಳು ಏನು ತಪ್ಪು ಮಾಡಿದ್ದವು? ಇಂತಹ ಕ್ರೂರ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆ ತಾಯಿಗೆ ಒಮ್ಮೆಯೂ ದಯೆ ಬರಲಿಲ್ಲವೇ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಕಣ್ಣೀರು ಹಾಕುತ್ತಿದ್ದಾರೆ.

 

​ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಯ ಹೇಳಿಕೆ ಹಾಗೂ ಕುಟುಂಬಸ್ಥರ ವಿಚಾರಣೆಯ ಬಳಿಕವಷ್ಟೇ ಘಟನೆಯ ನಿಖರ ಕಾರಣ ಹೊರಬರಬೇಕಿದೆ.

 

​ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕೌಟುಂಬಿಕ ಕಲಹಗಳು, ಮಾನಸಿಕ ಖಿನ್ನತೆಗಳು ಇಡೀ ಕುಟುಂಬವನ್ನೇ ಬಲಿಪಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯಾವುದೇ ಸಮಸ್ಯೆಗಾದರೂ ಆತ್ಮಹತ್ಯೆ ಅಥವಾ ಕೊಲೆ ಪರಿಹಾರವಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಪ್ತ ಸಮಾಲೋಚನೆ ಪಡೆಯುವುದು ಅನಿವಾರ್ಯವಾಗಿದೆ.