ಅತ್ತಿಗೇರಿ (ಹಾವೇರಿ): ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೀವಂತವಾಗಿರುವ ಮಹಿಳೆಯ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಯಾದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಆಡಳಿತಾತ್ಮಕ ತಪ್ಪಿನಿಂದ ಮಹಿಳೆಗೆ ದೊರೆಯುತ್ತಿದ್ದ ವಿವಿಧ ಸರ್ಕಾರಿ ಸೌಲಭ್ಯಗಳು ಸ್ಥಗಿತಗೊಂಡಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಅತ್ತಿಗೇರಿ ನಿವಾಸಿ ಶಿವಗಂಗವ್ವ ತಳಳ್ಳಿ (55) ಅವರ ಹೆಸರಿನಲ್ಲಿ ತಪ್ಪಾಗಿ ಮರಣ ದಾಖಲೆ ಸೃಷ್ಟಿಯಾಗಿದ್ದು, ಇದರಿಂದ ಅವರ ಬ್ಯಾಂಕ್ ಖಾತೆ ಸ್ಥಗಿತಗೊಂಡಿದೆ. ಜೊತೆಗೆ ಮಾಸಿಕ ಪಿಂಚಣಿ, ಗೃಹಲಕ್ಷ್ಮಿ ಯೋಜನೆಯ ನೆರವು ಹಾಗೂ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳೂ ನಿಂತಿವೆ.
ಶಿವಗಂಗವ್ವ ಅವರ ತಾಯಿ ಶಂಕ್ರವ್ವ ಚಿಕ್ಕಪ್ಪ ಮಿಳ್ಳಿಯವರು (98) 2025ರ ಮಾರ್ಚ್ 15ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದರು. ಬಳಿಕ ಕುಟುಂಬಸ್ಥರು ಅವರ ಮರಣ ನೋಂದಣಿಗಾಗಿ ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಾರಸುದಾರರ ಆಧಾರ್ ಕಾರ್ಡ್ ಪ್ರತಿಯನ್ನು ಕೇಳಿದ್ದ ಅಧಿಕಾರಿಗಳಿಗೆ ಶಿವಗಂಗವ್ವ ಅವರ ಆಧಾರ್ ಪ್ರತಿಯನ್ನು ನೀಡಲಾಗಿತ್ತು.





