01 September 2026 |

ಉಪ್ಪಿನಂಗಡಿ ಪೊಲೀಸರ ತ್ವರಿತ ಕಾರ್ಯಾಚರಣೆ: ಕಳೆದುಹೋದ ಚಿನ್ನ ಪತ್ತೆ, ನಗದಿನ ಬಗ್ಗೆ ತನಿಖೆ ಮುಂದುವರಿಕೆ

  • 31 Aug 2026 05:35:16 PM

ಉಪ್ಪಿನಂಗಡಿ: ಬಸ್ಸು ತಂಗುದಾಣದ ಬಳಿ ಕಳೆದುಹೋಗಿದ್ದ ಪರ್ಸ್ ಹಾಗೂ ಅದರಲ್ಲಿದ್ದ ಚಿನ್ನಾಭರಣ ಪತ್ತೆಹಚ್ಚುವಲ್ಲಿ ಉಪ್ಪಿನಂಗಡಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ.

 

ಕಡೇಶಿವಾಲಯ ನಿವಾಸಿ ವೀರಮ್ಮ ಎಂಬವರ ಪರ್ಸ್‌ವೊಂದು ಆಗಸ್ಟ್ 28ರಂದು ಮಧ್ಯಾಹ್ನ ಉಪ್ಪಿನಂಗಡಿ ಬಸ್ಸು ತಂಗುದಾಣದ ಸಮೀಪದ ಮೀನು ಮಾರುಕಟ್ಟೆ ಬಳಿ ನಾಪತ್ತೆಯಾಗಿತ್ತು. ಪರ್ಸ್‌ನಲ್ಲಿ ಸುಮಾರು ನಾಲ್ಕು ಪವನ್ ಚಿನ್ನಾಭರಣ ಹಾಗೂ ₹35 ಸಾವಿರ ನಗದು ಇದ್ದುದಾಗಿ ತಿಳಿಸಲಾಗಿತ್ತು. ಈ ಕುರಿತು ನ್ಯೂಸ್‌ನಲ್ಲಿ ವರದಿ ಪ್ರಕಟಿಸಿ, ಪರ್ಸ್ ಸಿಕ್ಕಲ್ಲಿ ಮಹೇಶ್ ಬಸ್ ಚಾಲಕ ನಾರಾಯಣ, ಕಡೇಶಿವಾಲಯ ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿತ್ತು.

 

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕಳೆದುಹೋಗಿದ್ದ ಚಿನ್ನಾಭರಣ ಪತ್ತೆಯಾಗಿದ್ದು, ನಗದು ಹಣದ ಕುರಿತು ತನಿಖೆ ಮುಂದುವರಿದಿದೆ ಎನ್ನಲಾಗಿದೆ.

 

ತನಿಖೆಯ ವೇಳೆ ಚಿನ್ನ ತನಗೆ ಸಿಕ್ಕಿದ್ದು ಎಂದು ನವೀನ್ ಹೇಳಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

 

ಉಪ್ಪಿನಂಗಡಿ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪುತ್ತೂರು ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಕೂಡ ಪೊಲೀಸರ ತನಿಖೆಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.