05 June 2025 | Join group

ಈ ದಿನ ಶುಭ ಮಹಾಶಿವರಾತ್ರಿ! ಶಿವನು ಸರ್ವಶಕ್ತಿಯಾದ, ಅನುಗ್ರಹ ಮತ್ತು ಸಂಹಾರದ ಯೋಗಿಗಳ ಯೋಗಿ, ಪರಮಾತ್ಮ.

  • 26 Feb 2025 12:11:22 PM

ಸುಧಾವಾಣಿ ಓದುಗರಿಗೆ ಮಹಾಶಿವರಾತ್ರಿಯ ಹಬ್ಬದ ಹಾರ್ದಿಕ ಶುಭಾಶಯಗಳು..

ಮಹಾಶಿವರಾತ್ರಿ ಫೆ. 26 : ದಕ್ಷಿಣ ರಾಮೇಶ್ವರದಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಆಚರಿಸುವ ಮಹಾ ಹಬ್ಬ ಅದೇ ಮಹಾಶಿವರಾತ್ರಿ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳು ಶಿವರಾತ್ರಿ ಬರುತ್ತದೆ ಆದರೆ ಪ್ರತಿವರ್ಷ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಮಹಾಶಿವರಾತ್ರಿಯ ದಿನವೆಂದು ಕರೆಯಲಾಗುತ್ತದೆ. ಮಹಾಶಿವರಾತ್ರಿ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಡುವೆ ಬರುವ ವಿಶೇಷ ದಿನ ಮತ್ತು ಇದು ಶಿವನ ಗೌರವಾರ್ಥವಾಗಿ ಆಚರಿಸಲಾಗುವ ಹಿಂದೂ ಹಬ್ಬ. 

 

ಋತು ಬದಲಾಗುವ ದಿನ, ಚಳಿಗಾಲ ಹೋಗಿ ವಸಂತ ಮತ್ತು ಬೇಸಿಗೆ ಕಾಲದ ಪ್ರಾರಂಭ, ಆದರೆ ಈ ದಿನ ಚಳಿಗಾಲ ಉತ್ತುಂಗದಲ್ಲಿದ್ದು ಸೂರ್ಯನ ಶಾಖ ಕಡಿಮೆಯಾಗಿರುತ್ತದೆ. ಚಂದ್ರನ ಪ್ರಕಾಶವು ಕ್ಷೀಣಿಸುವ ಈ ದಿನವನ್ನು ನಮ್ಮ ಪೂರ್ವಜರು ಅರಿತೇ, ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ವ್ಯತಾಸಕ್ಕೆ ನಮ್ಮ ದೇಹ ಹೊಂದಿಕೊಳ್ಳಬೇಕಾಗುತ್ತೆ ಎನ್ನುವ ನಿಟ್ಟಿನಲ್ಲಿ ಈ ರೀತಿಯ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು.

 

ಬ್ರಹ್ಮಾಂಡದ ಎರಡು ಮಹಾ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ವಿವಾಹದ ಮಹೋತ್ಸವದ ದಿನವಿದು ಎಂಬಹುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇದೆ ಆಗಿದೆ ಎನ್ನಲಾಗಿದೆ. ದೇವತೆಗಳು ಮತ್ತು ಅರಸರ ನಡುವೆ ನಡೆದ ಸಮುದ್ರ ಮಂಥನದಲ್ಲಿ ಹೊರಹುಮ್ಮಿದ ವಿಷವನ್ನು ಶಿವ ಕುಡಿದ, ಆದರೆ ವಿಷ ಗಂಟಲಿಂದ ಕೆಳಗಡೆ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣ. ಈ ವಿಷದಿಂದ ಶಿವನ ಕುತ್ತಿಗೆ ಭಾಗ ನೀಲಿಯಾಯಿತು ಆದ್ದರಿಂದಲೇ ಶಿವನಿಗೆ ನೀಲಕಂಠ ಎಂಬ ಹೆಸರು ಬಂದಿದೆ.

 

ಮಹಾಶಿವರಾತ್ರಿಯಂದು ಉಪವಾಸ ವೃತ ಕೈಗೊಂಡರೆ ಒಳ್ಳೆಯದು. ಪ್ರಾತಃಕಾಲ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಶುಭ್ರವಾದ ಶ್ವೇತ ವಸ್ತ್ರ ಧರಿಸಿ ಶಿವನ ಪೂಜೆಯಲ್ಲಿ ತೊಡಗಿಸುವುದು ಉತ್ತಮ. ಶಿವಲಿಂಗಕ್ಕೆ ಹಾಲು, ಬಿಲ್ವಪತ್ರೆ, ಶ್ರೀಗಂಧ, ತುಪ್ಪ, ಸಕ್ಕರೆ ಮತ್ತು ಇನ್ನಿತರ ಶಿವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. 

 

ಭಕ್ತರು ಉಪವಾಸದ ವೃತಾಚರಣೆಯಲ್ಲಿ ಇರುವಾಗ ಸಾತ್ವಿಕ ಆಹಾರ ಸೇವಿಸಬೇಕು ಅದರಲ್ಲೂ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸೋದು ಉತ್ತಮ. ಇಡೀ ದಿನದ ಪೂಜಾ ಕೈಂಕರ್ಯಗಳ ಬಳಿಕ, ಮರುದಿನ ಬೆಳಿಗ್ಗೆ ಉಪವಾಸವನ್ನು ಅಂತ್ಯಗೊಳಿಸಿಲಾಗುಹುದು.ರಾತ್ರಿಯಿಡಿ ಶಿವನ ಜಪ ಮಾಡುವುದರ ಮೂಲಕ ಶಿವನನ್ನು ಒಲಿಸಬಹುದು. ಮಹಾಶಿವರಾತ್ರಿಯ ದಿವಸ ಶಿವದೇವರ ದೇವಸ್ಥಾನಕ್ಕೆ ಹೋಗಿ ಶಿವ ದೇವರ ದರ್ಶನ ಪಡೆಯುವುದು ತುಂಬಾ ಉತ್ತಮ. ಉಪವಾಸದ ಸಂದರ್ಭದಲ್ಲಿ ಸಾತ್ವಿಕ ಆಹಾರವನ್ನು ಹೊರತುಪಡಿಸಿ ಅಕ್ಕಿ, ಗೋಧಿ, ಬೇಳೆಕಾಳುಗಳಿಂದ ಬೇಯಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಭಕ್ತರು ಬೆಳ್ಳುಳ್ಳಿ, ಈರುಳ್ಳಿ ಅಥವಾ ಮಾಂಸಾಹಾರದ ಊಟವನ್ನು ತ್ಯಜಿಸಬೇಕು. 

 

ಮಹಾಶಿವರಾತ್ರಿಯ ಪೂಜೆಯನ್ನು 4 ಆಯಾಮ ಪೂಜೆಯೆಂದು ವಿಂಗಡಿಸಲಾಗಿದೆ. ಸಂಜೆ ಸೂರ್ಯಾಸ್ತದ ಸಮಯ 6.00 ಗಂಟೆಗೆ ಆರಂಭಿಸಿ 9.00 ಗಂಟೆಯವರೆಗೆ ಮೊದಲ ಆಯಾಮ ಪೂಜೆಯನ್ನು ಆಚರಣೆ ಮಾಡಲಾಗುತ್ತದೆ. ನಂತರ 2ನೇ ಅವಧಿಯನ್ನು ರಾತ್ರಿ 9.00 ರಿಂದ 12.00 ರವರೆಗೆ, 3ನೇ ಆಯಾಮ ಪೂಜೆ ಮಧ್ಯ ರಾತ್ರಿ 12.00 ರಿಂದ 3.00 ಗಂಟೆಯವರೆಗೆ ನಡೆಯಲಿದ್ದು, 4ನೇ ಆಯಾಮ ಪೂಜೆ 3.00 ಗಂಟೆಯಿಂದ ಬೆಳಿಗ್ಗೆ 6.00 ಗಂಟೆಯವರೆಗೆ ನೆರವೇರಲಿದೆ. ಶಿವ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ, ಹರ ಹರ ಮಹಾದೇವ, ಶಂಭೋ ಶಿವ ಶಂಕರ ಮಾತ್ರಗಳನ್ನು ರಾತ್ರಿ ಇಡೀ ಪಠಿಸಲಾಗುತ್ತದೆ.

 

ಭಗವಾನ್ ಶಿವನ ಕೃಪೆಯಿಂದ ನಿಮ್ಮ ಜೀವನದಲ್ಲಿ ಅರೋಗ್ಯ, ಆಯುಷ್ಯ, ಸಂತೋಷ, ಮತ್ತು ಶಾಂತಿ ತುಂಬಿ ಹರಿಯಲಿ. ಈ ಪವಿತ್ರ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಶುದ್ಧತೆ, ಭಕ್ತಿ ಮತ್ತು ಹೊಸ ಬೆಳಕನ್ನು ತಂದುಕೊಡಲಿ.