ಬಂಟ್ವಾಳ, ಫೆ. 25 : ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದ ಹುಡುಗ ಫೆಬ್ರವರಿ 25 ರಂದು ನಾಪತ್ತೆಯಾಗಿದ್ದಾನೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು, ಅಮೆಮಾರ್ ನಿವಾಸಿ ಪದ್ಮನಾಭರವರ ಪುತ್ರ ದಿಗಂತ್ ನಾಪತ್ತೆಯಾದ ವಿದ್ಯಾರ್ಥಿ.
ಈತನ ವಯಸ್ಸು 17 ವರ್ಷವಾಗಿದ್ದು, ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಈತ ಇಂದು ಸಂಜೆಯಿಂದ ನಾಪತ್ತೆಯಾಗಿದ್ದಾನೆ.
ಮನೆಯಲ್ಲಿ ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿದ್ದು, ದೇವಸ್ಥಾನಕ್ಕೆ ಹೋಗಿಲ್ಲ ಎಂಬ ಮಾಹಿತಿ ದೊರೆತಿದೆ. ಮನೆಯವರು ದೇವಸ್ಥಾನಕ್ಕೂ ಹೋಗದೆ ಮನೆಗೂ ಬರದೇ ಇರುವ ಪುತ್ರನ ಬಗ್ಗೆ ಚಿಂತಿತರಾಗಿದ್ದಾರೆ. ಆತನ ಚಪ್ಪಲಿಗಳು ಮತ್ತು ಮೊಬೈಲ್ ರೈಲ್ವೆ ಹಳಿಯಲ್ಲಿ ಬಿದ್ದಿದ್ದರಿಂದ ಮನೆಯವರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ನಾಪತ್ತೆಯಾದವರ ಫೋಟೋ ಹಾಕಲಾಗಿದ್ದು, ಎಲ್ಲಿಯಾದರೂ ಕಂಡರೆ ಹತ್ತಿರದ ಪೊಲೀಸ್ ಠಾಣೆ ಮಾಹಿತಿ ಕೊಡಬೇಕಾಗಿ ಮನೆಯವರು ವಿನಂತಿಸಿಕೊಂಡಿದ್ದಾರೆ.