ಬಂಟ್ವಾಳ, ಮಾರ್ಚ್ 06, 2025 : ಫೆ. 25 ರಂದು ನಾಪತ್ತೆಯಾದ ದಿಗಂತ್ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ವಿದ್ಯಾರ್ಥಿ ನಿಗೂಢ ನಾಪತ್ತೆ ಪ್ರಕರಣಕ್ಕೆ 10 ದಿನಗಳು ಕಳೆದವು, ಆದರೂ ವಿದ್ಯಾರ್ಥಿಯ ಸುಳಿವು ಇನ್ನೂ ಸಿಕ್ಕಿಲ್ಲ.
ದಿಗಂತ್ ಪೋಷಕರು ಈಗಾಗಲೇ ಹೈಕೋರ್ಟ್ ಮೊರೆ ಹೋಗಿದ್ದರು, ದಿಗಂತ್ ತಂದೆ ಪದ್ಮನಾಭ್, ಮಗನನ್ನು ಪತ್ತೆ ಹಚ್ಚಿ ಕೊಡಲು ಪೊಲೀಸರಿಗೆ ನಿರ್ದೇಶಿಸಬೇಕೆಂದು ಕೋರಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಜಸ್ಟೀಸ್ ವಿ.ಕಾಮೇಶ್ವರ್ ರಾವ್, ಜಸ್ಟೀಸ್ ಟಿ.ಎಂ ನಡಾಫ್ರಿಂದ ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ಮಾಡಲಾಗಿದೆ ಮತ್ತು ಮಾರ್ಚ್ 12ರ ಒಳಗೆ ತನಿಖಾ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಸಲು ಪೊಲೀಸರಿಗೆ ಆದೇಶ ನೀಡಲಾಗಿದೆ. ಮಾರ್ಚ್ 13ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಈಗಾಗಲೇ ಮಾರ್ಚ್ 05 ರಂದು ರಾಜ್ಯ ವಿಧಾನಸೌದದಲ್ಲೂ ಈ ಬಗ್ಗೆ ವಿಚಾರ ಪ್ರಸ್ತಾಪನೆಯಾಗಿದ್ದು, ನಾನಾ ಆಯಾಮಗಳಿಂದ ತಂಡ ರಚಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸ್ಪೀಕರ್ ಯು .ಟಿ ಖಾದರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಜಿಲ್ಲೆಯ ಹಲವಾರು ಮುಖಂಡರು ದಿಗಂತ್ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ರಾಜಕೀಯ, ಸಂಘಟನೆ ಮುಖಂಡರು ಮತ್ತು ಸಾರ್ವಜನಿಕ ಬಾಂಧವರು ಈಗಾಗಲೇ ಫರಂಗಿಪೇಟೆ ಮುಷ್ಕರ ನಡೆಸಿ ಹೋರಾಟ ಮಾಡಿದ್ದಾರೆ ಆದರೆ ದಿಗಂತ್ ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ವಿಸ್ಮಯಕಾರಿಯಾಗಿ ಉಳಿದಿದೆ.