ಬಂಟ್ವಾಳ ಕಂಬಳ, ಮಾರ್ಚ್ 06,2025 : ಬಂಟ್ವಾಳ ತಾಲೂಕು ನಾವೂರ ಗ್ರಾಮದ ಕೂಡಿಬೈಲು ಎಂಬಲ್ಲಿ ನಡೆಯುವ 14ನೇ ವರ್ಷದ ಹೊನಲು ಬೆಳಕಿನ ಬಯಲು ಜೋಡುಕರೆ ಮುಡೂರು-ಪಡೂರು ಬಂಟ್ವಾಳ ಕಂಬಳ ದಿನಾಂಕ 8ನೇ ಶನಿವಾರ ಮತ್ತು 9 ನೇ ಆದಿತ್ಯವಾರ, 2025 ರಂದು ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಮಾಜಿ ಸಚಿವ, ಬಂಟ್ವಾಳ ತಾಲೂಕಿನ ಮಾಜಿ ಶಾಸಕ ಶ್ರೀ. ಬಿ. ರಮಾನಾಥ ರೈ ನೇತೃತ್ವದ, ಪಿಯುಸ್ ಎಲ್ ರೋಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ಮತ್ತು ಚಂದ್ರ ಪ್ರಕಾಶ ಶೆಟ್ಟಿ ತುಂಬೆ ಇವರ ಕಾರ್ಯಾಧ್ಯಕ್ಷತೆಯಲ್ಲಿ, ಬಿ. ಪದ್ಮಶೇಖರ್ ಜೈನ್ ಸಂಚಾಲಕರಾಗಿ ಹಾಗೂ ಕ್ರೀಡಾಭಿಮಾನಿಗಳ, ಹಿತೈಷಿಗಳ ಸಹಕಾರ ಮತ್ತು ಪ್ರೋತ್ಸಾಹದಿಂದ ಬಂಟ್ವಾಳ ಕಂಬಳ ಆದ್ದೂರಿಯಾಗಿ ನೆರವೇರಲಿದೆ.
ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು ಭಾಗವಹಿಸಿರುವುದು ಈ ಕಂಬಳಕ್ಕೆ ಮೆರಗು ನೀಡಲಿದೆ. ಮಾನ್ಯ ಮುಖ್ಯಮಂತ್ರಿರವರಿಗೆ ಕಾಲು ನೋವಿನ ಸಮಸ್ಯೆ ಇರುವುದರಿಂದ ಅವರ ಆಗಮನದ ಸಮಯ ಇನ್ನೂ ನಿಗದಿಯಾಗಿಲ್ಲ ಎಂದು ರಮಾನಾಥ ರೈಯವರು ಮಂಗಳೂರಿನಲ್ಲಿ ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಕಂಬಳ ಬೆಳಗ್ಗೆ ಸರಿಯಾಗಿ 8:45ಕ್ಕೆ ಶುರುವಾಗಲಿದ್ದು ಹಂತ ಹಂತವಾಗಿ ಕೋಣಗಳನ್ನು ಕರೆಗೆ ಇಳಿಸುವ ಪ್ರಕ್ರಿಯೆ ನಡೆಯಲಿದೆ.
ಎಲ್ಲಾ ವಿಭಾಗಗಳ ಕೋಣಗಳ ಓಟದ ಸ್ಪರ್ಧೆ ನಡೆಯಲಿದ್ದು ಕನಹಲಗೆ ಏಳುವರೆ ಮೀಟರ್ ಎತ್ತರಕ್ಕೆ ನೀರು ಚಿಮ್ಮಿಸುವ ಎಲ್ಲಾ ಕೋಣಗಳಿಗೆ 2 ಪವನ್ ನೀಡಿ ಗೌರವಿಸಲಾಗುವುದು ಎಂದು ಕಂಬಳದ ಅಧ್ಯಕ್ಷರಾದ ಪಿಯುಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ. ಹಗ್ಗದ ಹಿರಿಯ ವಿಭಾಗದಲ್ಲಿ ಕೂಡಾ ಪ್ರಥಮ ಸ್ಥಾನಕ್ಕೆ 2 ಪವನ್ ಬಂಗಾರ ಕೊಡಲಿದ್ದಾರೆ.
ನಾವೂರು ಕಂಬಳ ಬಂಟ್ವಾಳ ಎಂದು ಗೂಗಲ್ ಟೈಪ್ ಮಾಡಿ ಹುಡುಕಿದರೆ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತದೆ. ಬಿ ಸಿ ರೋಡಿನಿಂದ ಪ್ರಯಾಣಿಸುವವರು ಬಂಟ್ವಾಳದ ಮಣಿಹಳ್ಳಕ್ಕೆ ತಲುಪಿ, ಅಲ್ಲಿಂದ ಸರಪಾಡಿ ಕ್ರಾಸ್ ರಸ್ತೆಯಿಂದ ಅಲ್ಲಿಪಾದೆ ರಸ್ತೆಯಾಗಿ ಚಲಿಸಿದರೆ ನಾವೂರ ಗ್ರಾಮದ ಕೋಡಿಬೈಲು ಕಂಬಳದ ಸ್ಥಳ ಸಿಗಲಿದೆ.