ಬಂಟ್ವಾಳ, ಮಾರ್ಚ್ 08, 2025 : ಒಂದು ಕಡೆ ಫಸಲು ಕಡಿಮೆ, ಇನ್ನೊಂದು ಕಡೆ ಮಾರುಕಟ್ಟೆಯಲ್ಲಿ ಬೆಲೆ ಏರುತ್ತಿಲ್ಲ, ಇದು ನಮ್ಮ ಅಡಿಕೆ ಬೆಳೆಗಾರರ ಸದ್ಯದ ಪರಿಸ್ಥಿತಿ. ಇದರ ಜೊತೆಗೆ ಹಲವಾರು ಬೇರೆ ಸಮಸ್ಯೆಗಳ ಪಟ್ಟಿ ದೊಡ್ಡದೇ ಇದೆ. ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಬೆಲೆ ಬಹಳದ ದಿನದಿಂದ ಏರಿಕೆ ಆಗದೆ ನಿಂತ ನೀರಾಗಿದೆ.
ಹೌದು, ಕರಾವಳಿ ಭಾಗದ ಜನರ ಪ್ರಮುಖ ವಾಣಿಜ್ಯ ಬೆಳೆಯೆಂದರೆ ಅದು ಅಡಿಕೆ. ಬಹಳಷ್ಟು ಕುಟುಂಬ ಅಡಿಕೆ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿದೆ. ಭತ್ತ ಬೆಳೆಯನ್ನು ಬಹಳ ವರುಷದಿಂದ ಕೈಬಿಟ್ಟ ಕರಾವಳಿ ಭಾಗದ ಜನ ಈಗ ಅಡಿಕೆ ಬೆಳೆಯನ್ನೇ ನಂಬಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಕಾಣುತಿಲ್ಲ ಯಾವುದೇ ಪ್ರಗತಿ:
ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಬಹಳ ದಿನದಿಂದ ಏನು ಏರುಪೇರು ಕಾಣುತ್ತಿಲ್ಲ. ಹೊಸ ಅಡಿಕೆ ಬೆಲೆ, ಬಹಳ ದಿನಗಳಿಂದ ರೂಪಾಯಿ 370 ರ ಆಸುಪಾಸಿನಲ್ಲಿದೆ. ಕಳೆದ ವರ್ಷದಂತೆ ಈ ವರ್ಷವೂ ಒಳ್ಳೆಯ ಮೌಲ್ಯಮಾಪನ ಬರಬಹುದು ಎಂದು ಕಾಯುತ್ತಿರಿರುವ ಕೃಷಿಕನಿಗೆ ನಿರಾಸೆಯಾಗಿದೆ. ಅಡಿಕೆ ಮಾರುಕಟ್ಟೆ ತಜ್ಞರುಗಳ ಪ್ರಕಾರ ಏಪ್ರಿಲ್ ತಿಂಗಳ ನಂತರ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಖರ್ಚು ವೆಚ್ಚಗಳು ಅಧಿಕ:
ಅಡಿಕೆ ಬೆಲೆ ಏರಿದ ಕೂಡಲೇ ಕೆಲಸಗಾರರ ಸಂಬಳವೂ ಹೆಚ್ಚಾಗುತ್ತದೆ, ಆದರೆ ಅಡಿಕೆ ಬೆಲೆ ಇಳಿದರೆ ಸಂಬಳ ಮಾತ್ರ ಕಡಿಮೆಯಾಗಲ್ಲ. ಇದು ಮಾರುಕಟ್ಟೆಯಲ್ಲಿ ಬೆಲೆ ಕುಸಿದರೆ ಅಡಿಕೆ ಕೃಷಿಕರ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಅದರ ಜೊತೆಗೆ ಕಟಾವ್, ಔಷಧಿ ಸಿಂಪಡಣೆ ಇನ್ನಿತರ ಹಲವು ಕೆಲಸಕ್ಕೆ ಕೂಲಿಗಳನ್ನು ಅವಲಂಬಿತರಾಗಿರಬೇಕಾಗುತ್ತದೆ. ಕೆಲಸಕ್ಕೆ ಸರಿಯಾದ ಸಮಯಕ್ಕೆ ಕೆಲಸಗಾರರು ಸಿಗದೇ ಇರುವುದರಿಂದ ಅಡಿಕೆ ಫಸಲಿನಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ವಾತಾವರಣದ ಸಮಸ್ಯೆ :
ಅತಿಯಾದ ಬಿಸಿಲು ಸೆಕೆಯಿಂದ ಅಡಿಕೆ ಮೊಗ್ಗುಗಳು ಉದುರುತ್ತವೆ. ಬಿಸಿಲಿನ ಪ್ರಭಾವಕ್ಕೆ ತೋಟಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ವಿಪರೀತ ಮಳೆಯಾದರೆ ಕೂಡ ಅಡಿಕೆ ಬೆಳೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಅಡಿಕೆ ಗುಂಡಿಗಳಲ್ಲಿ ನೀರು ನಿಂತು ಬೇರುಗಳಿಗೆ ಹಾನಿ ಮಾಡುತ್ತವೆ. ಕೊಳೆರೋಗಗಳು ಬಂದು ಫಸಲು ಕಡಿಮೆಯಾಗುತ್ತದೆ. ಈ ಎಲ್ಲಾ ಸಮಸ್ಯೆಯಿಂದ ನಿಜವಾದ ಬೆಳೆ ಪ್ರಮಾಣವನ್ನು ಪಡೆಯಲು ಕಷ್ಟವಾಗುತ್ತದೆ.
ವಿದೇಶಿ ಅಡಿಕೆ ಆಮದು ಮುಖ್ಯ ಕಾರಣ :
ಭೂತಾನ್, ಬರ್ಮಾ ಮತ್ತು ಇನ್ನಿತರ ದೇಶಗಳಿಂದ ಅಡಿಕೆ ಭಾರತಕ್ಕೆ ಆಮದು ಮಾಡುವುದರಿಂದ ಭಾರತದಲ್ಲಿ ಬೆಳೆಯುವ ಅಡಿಕೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಕಳ್ಳ ಮಾರ್ಗಗಳಿಂದ ಅಡಿಕೆ ಭಾರತಕ್ಕೆ ಬರುತ್ತದೆ, ಇದರ ಬಗ್ಗೆ ಸೂಕ್ತವಾದ ಕ್ರಮ ಜಾರಿಯಾಗದೇ ಇದ್ದಾರೆ ಈ ಸಮಸ್ಯೆ ಮತ್ತಷ್ಟು ವರುಷ ಇರಲಿದೆ ಎಂದು ಅಡಿಕೆ ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕೆಲವೇ ತಿಂಗಳ ಹಿಂದೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬೃಜೇಶ್ ಚೌಟ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಷ್ ಗೋಯಲ್ ಭೇಟಿ ಮಾಡಿ ರೈತರಿಗೆ ಸ್ಥಿರ ಮಾರುಕಟ್ಟೆ ದರಗಳನ್ನು ಖಚಿತಪಡಿಸಬೇಕು ಮತ್ತು ವಿದೇಶದಿಂದ ಅಡಿಕೆ ಆಮದಿನ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಚಿವರನ್ನು ಮನವಿ ಮಾಡಿದ್ದರು.
ಏಪ್ರಿಲ್ ತಿಂಗಳಿನಲ್ಲಿ ಬೆಲೆ ಏರಿಕೆಯ ನಿರೀಕ್ಷೆ :
ಏಪ್ರಿಲ್ ತಿಂಗಳ ನಂತರ ಅಡಿಕೆ ಬೆಲೆ ಏರುವ ಕಾಣಸು ಕಾಣುತ್ತಿದ್ದಾರೆ ಕರಾವಳಿ ಭಾಗದ ಮತ್ತು ರಾಜ್ಯದ ಇನ್ನಿತರ ಅಡಿಕೆ ಕೃಷಿಕರು. ಕನಿಷ್ಠ ರೂ. 500 ರವರಿಗೆ ಪ್ರತಿ ಕೆಜಿಗೆ ಬೆಲೆ ಏರಿಕೆ ಆದರೆ ಈಗಿನ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಜೀವನ ನಡೆಸಬಹುದು ಎಂದು ಕೃಷಿಕರ ಅಭಿಪ್ರಾಯ. ರಂಜಾನ್ ತಿಂಗಳು ನಡೆಯುವುದರಿಂದ ಕೂಡ ಬೆಲೆ ತಟಸ್ಥವಾಗಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಹೆಚ್ಚು ಬೆಲೆ ಏರಿಕೆಯ ನೀರಿಕ್ಷೆಯಲ್ಲಿದ್ದರೆ ರೈತರು.
ಹಾಗಾದರೆ ಬನ್ನಿ ನೋಡೋಣ ಸದ್ಯದ ಅಡಿಕೆ ಬೆಲೆ ದರ :
ಹೊಸ ಅಡಕೆ : ರೂ. 365
ಹಳೆ ಅಡಕೆ : ರೂ. 430
ಡಬಲ್ ಚೋಲ್: ರೂ. 460
ಹೊಸ ಪಟೋರಾ : ರೂ. 230
ಹಳೆ ಪಟೋರಾ: ರೂ. 310
ಹೊಸ ಉಳ್ಳಿ : ರೂ. 120
ಹಳೆ ಉಳ್ಳಿ : ರೂ.155
ಹೊಸ ಕೋಕಾ : ರೂ. 210
ಹಳೆ ಕೋಕಾ : ರೂ. 230
ಕರಿಗೋಟು : ರೂ. 90