ಬಂಟ್ವಾಳ, ಮಾರ್ಚ್ 10, 2025 : ಫೆಬ್ರವರಿ 25 ರಂದು ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕಿಡಿಬೆಟ್ಟುವಿನಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತು. ಈ ಪ್ರಕರಣ ಸಂಬಂಧ ರಾಜಕೀಯ ಪಕ್ಷಗಳು ಮತ್ತು ಹಿಂದೂ ಪರ ಸಂಘಟನೆಗಳು ಫರಂಗಿಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಪೊಲೀಸರಿಗೆ ಎಚ್ಚರಿಕೆ ನೀಡುವ ಮಟ್ಟಕ್ಕೆ ಹೋರಾಟ ನಡೆಸಿದವು. ಇದಲ್ಲದೆ, ಈ ಪ್ರಕರಣ ರಾಜ್ಯ ವಿಧಾನಸಭೆಯಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ತನಿಖೆಯ ತೀವ್ರತೆ ಕುರಿತು ಸ್ಪೀಕರ್ಗೆ ವರದಿ ನೀಡುವಂತೆ ಒತ್ತಾಯಿಸಲಾಯಿತು. ಹೈಕೋರ್ಟ್ ಕೂಡ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಪೊಲೀಸರಿಗೆ ಕಟ್ಟುನಿಟ್ಟಾದ ತನಿಖೆ ನಡೆಸುವಂತೆ ಆದೇಶ ನೀಡಿತು.
ನಾಪತ್ತೆಯಾಗಲು ಕಾರಣವೇನು?
12ನೇ ತರಗತಿಯಲ್ಲಿ ಕಲಿಯುತ್ತಿದ್ದ ದಿಗಂತ್, ಪರೀಕ್ಷೆಯ ಒತ್ತಡದಿಂದ ಪಾರಾಗಲು ಮನೆ ಬಿಟ್ಟು ಹೋಗಿದ್ದೇನೆ ಎಂಬ ಸತ್ಯ ಸಂಗತಿಯನ್ನು ಪೊಲೀಸರಿಗೆ ಖಚಿತಪಡಿಸಿದ್ದಾನೆ. ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದಿದ್ದ ದಿಗಂತ್, ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನಲ್ಲಿ ಪಿಸಿಎಂಬಿ ಆಯ್ಕೆ ಮಾಡಿದ್ದ.
ಈ ನಾಪತ್ತೆ ಪ್ರಕರಣ ಯಾಕೆ ಇಷ್ಟು ಸದ್ದು ಮಾಡಿತು?
ಫರಂಗಿಪೇಟೆಯಲ್ಲಿ ಗಾಂಜಾ ವ್ಯವಹಾರ ಹೆಚ್ಚಾಗಿದೆ ಎಂಬ ಕಾರಣದಿಂದ ಗಾಂಜಾ ಮಾಫಿಯಾದವರ ಕೈವಾಡ ಇರಬಹುದೆಂದು ಬಿಜೆಪಿ ಮತ್ತು ಹಿಂದೂ ಮುಖಂಡರು ಸಂಶಯ ವ್ಯಕ್ತಪಡಿಸಿದರು. ಇದರಿಂದ ಫರಂಗಿಪೇಟೆಯಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯ ಪರಿಣಾಮ ಪ್ರಕರಣ ಹೈಲೈಟ್ ಆಗಿ ಗಮನಸೆಳೆದಿತ್ತು. ದಕ್ಷಿಣ ಕನ್ನಡದ ಪ್ರಮುಖ ರಾಜಕೀಯ ನಾಯಕರುಗಳು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ, ಪ್ರಕರಣ ರಾಜ್ಯದ ಮಟ್ಟದಲ್ಲಿ ಇನ್ನಷ್ಟು ಪ್ರಚಾರ ಪಡೆದು ದೊಡ್ಡ ಸುದ್ದಿಯಾಯಿತು.
ಯಾಕೆ ಈ ಪ್ರಕರಣವನ್ನು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿತು?
ಫರಂಗಿಪೇಟೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಪ್ರಕಾರ, ಈ ಪ್ರದೇಶದಲ್ಲಿ ಗಾಂಜಾ ವ್ಯವಹಾರ ಬಹಳ ಅಧಿಕ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಆರೋಪ ಇದೆ. ಈ ವಿಚಾರವನ್ನು ಪ್ರತಿಭಟನೆಯ ಸಂದರ್ಭದಲ್ಲಿ ಭಾಷಣಗಳ ಮೂಲಕ ಪೊಲೀಸರಿಗೆ ಮನವರಿಕೆ ಮಾಡಲಾಗಿತ್ತು. ಹೀಗಾಗಿ, ದಿಗಂತ್ ಕೂಡ ಗಾಂಜಾ ಸಂಬಂಧಿತ ಕಾರಣಗಳಿಂದ ಪರಾರಿಯಾಗಿರಬಹುದೆಂಬ ನಂಬಿಕೆ ಈ ಸಂಘಟನೆಗಳಿಗಿತ್ತು.
ತಾಯಿಯ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು:
"ಯಾರದೋ ಕುಕೃತ್ಯದಿಂದ ದಿಗಂತ್ ನಾಪತ್ತೆಯಾಗಿದ್ದಾನೆ" ಎಂಬ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದಂತೆ, ಕೆಲವರು "ಅವನು ಪರೀಕ್ಷೆಗೆ ಹೆದರಿಕೊಂಡು ಮನೆಯಿಂದ ಓಡಿ ಹೋಗಿರಬಹುದು" ಎಂಬ ಸಂಶಯ ವ್ಯಕ್ತಪಡಿಸಿದರು. ಆದರೆ ಅದೇ ಸಂದರ್ಭದಲ್ಲಿ "ನನ್ನ ಮಗ ಪರೀಕ್ಷೆಗೆ ಹೆದರುವವನಲ್ಲ, ಆತ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮತ್ತು ಹಾಲ್ ಟಿಕೆಟ್ ಕೂಡ ಶಾಲೆಯಿಂದ ಪಡೆದು ತಂದಿದ್ದ" ಎಂಬ ತಾಯಿಯ ಹೇಳಿಕೆ, ಈ ಸಂಶಯಗಳನ್ನು ತಳ್ಳಿಹಾಕಿತು.
ಹೇಗೆ ಪರಾರಿಯಾದ ಮತ್ತು ಸಿಕ್ಕಿಬಿದ್ದ?
ಮನೆಯ ಹತ್ತಿರದ ರೈಲ್ವೆ ಹಳಿಯಲ್ಲಿ ನಡೆಯುತ್ತಾ, ಯಾರೆಂದರಲ್ಲಿ ಬೈಕ್ಗೆ ಕೈ ತೋರಿಸಿ ಮಂಗಳೂರಿಗೆ ಹೋದನು.ಅಲ್ಲಿ ಖಾಸಗಿ ಬಸ್ಸು ಹಿಡಿದು ಶಿವಮೊಗ್ಗಕ್ಕೆ ತೆರಳಿ, ಅಲ್ಲಿಂದ ರೈಲಿನಲ್ಲಿ ಕೆಂಗೇರಿಗೆ, ನಂತರ ನಂದಿಬೆಟ್ಟಕ್ಕೆ ಹೋಗಿದ್ದನು. ನಂದಿಬೆಟ್ಟದ ರೆಸಾರ್ಟ್ನಲ್ಲಿ ಎರಡು ದಿನ ಕೆಲಸ ಮಾಡಿ ಹಣ ಸಂಪಾದಿಸಿದನು. ಕೆಂಗೇರಿಯಿಂದ ಮೈಸೂರಿಗೆ, ನಂತರ ರೈಲಿನಲ್ಲಿ ಉಡುಪಿಗೆ ಆಗಮಿಸಿದನು. ಉಡುಪಿಯ ಡಿ ಮಾರ್ಟ್ ಮಾಲ್ನಲ್ಲಿ ಬಟ್ಟೆ ಖರೀದಿಸಲು ಹೋಗಿದ್ದಾಗ, ಕೈಯಲ್ಲಿ ಹಣ ಇಲ್ಲದ ಕಾರಣ ಅಲ್ಲಿಂದ ಓಡಲು ಪ್ರಯತ್ನಿಸಿದನು. ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಅವನನ್ನು ಹಿಡಿದು ವಿಚಾರಿಸಿದಾಗ, ಸಾರ್ವಜನಿಕರು ಸೇರಿ "ಇವನೇ ದಿಗಂತ್ ಇರಬಹುದು" ಎಂದು ಪೊಲೀಸರಿಗೆ ಮಾಹಿತಿ ನೀಡಿದರು.ಉಡುಪಿ ಪೊಲೀಸರು ಅವನನ್ನು ವಿಚಾರಣೆ ನಡೆಸಿ, ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದರು.
ಯಾಕೆ ಈತನ ಪತ್ತೆ ಮಾಡುವಲ್ಲಿ ತಡವಾಯಿತು?
ಫೆಬ್ರವರಿ 25 ರಂದು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ, 500 ರೂ. ಪಡೆದು ಮನೆಯಿಂದ ಹೋದನು.ತನ್ನ ಕಾಲಿಗೆ ಗಾಯವಾಗಿ ರಕ್ತ ಒಸರುತ್ತಿದ್ದರೂ, ಅದರ ಗುರುತು ಉಳಿಯದಂತೆ ಚಪ್ಪಲಿಗೆ ಒರೆಸಿದನು. ಮೊಬೈಲ್ ಮತ್ತು ಚಪ್ಪಲಿಯನ್ನು ರೈಲ್ವೇ ಹಳಿ ಬಳಿ ಬಿಟ್ಟು ಹೋಗಿದ್ದರಿಂದ, ಪೊಲೀಸರಿಗೆ ಪತ್ತೆ ಹಚ್ಚಲು ತಡವಾಯಿತು. ಯಾವುದೇ ಸುಳಿವು ಬಿಟ್ಟು ಹೋಗಬಾರದು ಎಂಬ ಪ್ರಜ್ಞೆ ಅವನಿಗಿತ್ತು, ಹೀಗಾಗಿ ಕುಟುಂಬ ಅಥವಾ ಸ್ನೇಹಿತರನ್ನು ಸಂಪರ್ಕಿಸಿರಲಿಲ್ಲ.
ಕೊನೆಗೂ ಪತ್ತೆಯಾದ ದಿಗಂತ್ :
ಪೊಲೀಸರ ಪ್ರಯತ್ನ ಮತ್ತು ರಾಜ್ಯ ಸರಕಾರದ ಕಾಳಜಿಯಿಂದ ಕೊನೆಗೂ 11 ದಿನಗಳ ನಂತರ ದಿಗಂತ್ ಪತ್ತೆಯಾಗಿದ್ದಾನೆ. ನಾಪತ್ತೆಗೆ ಸಂಬಂಧಪಟ್ಟಂತೆ ಹಲವಾರು ರೀತಿಯ ಊಹಾಪೋಹಗಳು ಕೇಳಿಬಂದರೂ ಸತ್ಯಸಂಗತಿ ಸ್ವತಃ ನಾಪತ್ತೆಯಾದ ವ್ಯಕ್ತಿ ತಿಳಿಸಿದ್ದು ಇನ್ನು ಮುಂದೆ ಯಾರು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬುವುದು ಬಹಳಷ್ಟು ಪೋಷಕರ ಒತ್ತಾಯ. ಫರಂಗಿಪೇಟೆಯಂತಹ ಕೋಮು ಸೂಕ್ಷ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದರೆ ಇದರ ಪರಿಣಾಮ ಬೇರೆ ಆಯಾಮಕ್ಕೆ ಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಜನತೆ ಎಚ್ಚರ ಮತ್ತು ಸಂಯಮದಿಂದ ವರ್ತಿಸಬೇಕಾಗಿ ಪ್ರಜ್ಞಾವಂತ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.