ದಕ್ಷಿಣ ಕನ್ನಡ, ಮಾರ್ಚ್ 12, 2025 : ಕರಾವಳಿ ಜನರ ಮೇಲೆ ಮಳೆರಾಯ ಕರುಣೆ ತೋರಿದ್ದಾನೆ. ಕೆಂಡದಂತಿದ್ದ ಕರಾವಳಿಗೆ ಮಳೆರಾಯ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ತುಂಬಾ ಮಳೆ ಸುರಿದಿದೆ. ಮಳೆಯಿಂದಾಗಿ ಇಂದು ಅಲ್ಪ ಪ್ರಮಾಣದ ಶೀತ ವಾತಾವರಣ ಸೃಷ್ಟಿಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಅಬ್ಬರವಾಗಿತ್ತು. ಉಷ್ಣತರಂಗದ ಪರಿಣಾಮವಾಗಿ ಭೂಮಿ ತಾಪಮಾನ ಹೆಚ್ಚಾಗಿ, ಜನತೆ ಕಷ್ಟ ಅನುಭವಿಸುತ್ತಿದ್ದರು. ಇಂದು ಕೆಲವು ಭಾಗಗಳಲ್ಲಿ ಅಚಾನಕ್ ಮಳೆ ಸುರಿದು ತಂಪಿನ ಅನುಭವ ನೀಡಿದೆ. ಹಲವಾರು ಕಡೆ ಆಲಿಕಲ್ಲು ಮಳೆ ಬಿದ್ದಿದೆ.
ಇವತ್ತಿನ ಮಳೆಯಿಂದಾಗಿ ತಾಪಮಾನ ಕಡಿಮೆಯಾಗಿದೆ ಮತ್ತು ಕೃಷಿಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಸುಬ್ರಮಣ್ಯ, ಸುಳ್ಯ, ಧರ್ಮಸ್ಥಳ, ಬೆಳ್ತಂಗಡಿ, ಬಂಟ್ವಾಳ ಮತ್ತು ಇನ್ನಿತರ ಪ್ರದೇಶಗಳಲ್ಲಿ ಅಧಿಕ ಪ್ರಮಾಣದ ಮಳೆಯಾದ ವರದಿಯಾಗಿದೆ. ಸಾಮಾನ್ಯವಾಗಿ ದಕ್ಷಿಣ ಕನ್ನಡದ ಎಲ್ಲಾ ಪ್ರದೇಶಗಳಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಸಂಜೆಯಾಗುತ್ತಿದ್ದಂತೆ ಗುಡುಗು ಬರಲು ಶುರುವಾಗಿದ್ದು, ಮೋಡ ಕವಿದ ವಾತಾವರಣವಿತ್ತು.
ಬಿಸಿಲಿನ ಪ್ರಭಾವದಿಂದ ತತ್ತರಿಸಿದ ಕರಾವಳಿ ಜನ ನಿಟ್ಟಿಸುರು ಬಿಟ್ಟಿದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಬರದೇ ಹೋದರೆ ಪುನಃ ಸೆಕೆಯ ಪ್ರಮಾಣ ಹೆಚ್ಚಾಗಿ ಮತ್ತಷ್ಟು ಸಂಕಷ್ಟ ಎದುರಿಸಬಹುದೆಂದು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ಸದ್ಯಕ್ಕೆ ಮಾತ್ರ ಮಳೆರಾಯ ಕೊಂಚ ನೆಮ್ಮದಿ ಕೊಟ್ಟಿದ್ದು ಇನ್ನು ಮುಂದೆಯೂ ತುಂತುರು ಮಳೆಯ ನಿರೀಕ್ಷೆಯಲ್ಲಿದ್ದಾರೆ ಕರಾವಳಿ ಭಾಗದ ಜನರು.