11 June 2025 | Join group

ಅಪಘಾತ ಪೀಡಿತರಿಗೆ ತಕ್ಷಣ ಚಿಕಿತ್ಸೆ – ಭಾರತ ಸರಕಾರದ ₹1.5 ಲಕ್ಷದವರೆಗೆ ನೆರವು!

  • 13 Mar 2025 01:16:32 AM

ಅಪಘಾತದ ಸಂದರ್ಭಗಳಲ್ಲಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ದೊರಕಲು ಜನರಲ್ಲಿ ಜಾಗೃತಿ ಮೂಡಿಸಲು ಈ ಮಾಹಿತಿಯನ್ನು ಓದಿ ಮತ್ತು ಅವಶ್ಯಕತೆ ಇರುವವರಿಗೆ ತಿಳಿಸಿ.

 

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತಕ್ಷಣ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣವನ್ನು ಕಳೆದುಕೊಳ್ಳುವ ಘಟನೆಗಳು ಬಹಳಷ್ಟು ನಡೆಯುತ್ತದೆ. ಬಹು ಕಾರಣಗಳಿಂದ ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ಜನ ಹಿಂಜರಿಯುತ್ತಾರೆ. ಆದರೆ ಈಗ ಕೇಂದ್ರ ಸರಕಾರ ನಗದು ರಹಿತ (Cashless Treatment) ಚಿಕಿತ್ಸಾ ಯೋಜನೆಯೊಂದನ್ನು ಪ್ರಾರಂಭಿಸಿದ್ದು ಹಲವಾರು ಜೀವಗಳಿಗೆ ನೆರವಾಗಲಿದೆ. 

 

ಹೌದು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಮಾರ್ಚ್ 2025 ತಿಂಗಳಿಂದ ಒಂದೂವರೆ(1.5) ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಈ ಯೋಜನೆಯಡಿಯಲ್ಲಿ ದೇಶದಲ್ಲಿ ಎಲ್ಲಿಯಾದರೂ ಯಾವುದೇ ರಸ್ತೆ ಅಪಘಾತ ಸಂಭವಿಸಿದಲ್ಲಿ, ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆಗಾಗಿ ಭಾರತ ಸರಕಾರವು ಗರಿಷ್ಠ 1.5 ಲಕ್ಷ ರೂ. ಗಳ ಸಹಾಯವನ್ನು ನೀಡಲಿದೆ.

 

ವಾಸ್ತವವಾಗಿ, ಅಪಘಾತದ ನಂತರದ ಒಂದು ಗಂಟೆಯನ್ನು ' ಗೋಲ್ಡನ್ ಅವರ್ ' ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಚಿಕಿತ್ಸೆಯ ಕೊರತೆಯಿಂದಾಗಿ ಅನೇಕ ಸಾವುಗಳು ಸಂಭವಿಸುತ್ತದೆ. ಇದನ್ನು ಕಡಿಮೆ ಮಾಡಲು, ನಿತಿನ್ ಗಡ್ಕರಿ ಭಾರತ ಸರಕಾರದ ಮೂಲಕ ಈ ಯೋಜನೆಯನ್ನು ಜಾರಿಗೆ ಮಾಡಿದ್ದಾರೆ. 

 

ಈ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ನಿತಿನ್ ಗಡ್ಕರಿ ಪ್ರಾರಂಭಿಸಿದರು. ರಸ್ತೆ ಅವಘಡದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾರ್ಚ್ 14, 2024 ರಂದು ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಆರಂಭಿಸಿತು. ಇದಾದ ನಂತರ ಜನವರಿ 7, 2024 ರಂದು ನಿತಿನ್ ಗಡ್ಕರಿಯವರು ದೇಶದಾದ್ಯಂತ ಈ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದರು.

 

ಈ ನಿಯಮ ಖಾಸಗಿ ಆಸ್ಪತ್ರೆಗಳಿಗೂ ಅನ್ವಹಿಸುತ್ತದೆ. ರಸ್ತೆ ಅಪಘಾತದ ಸಂಭವಿಸಿದಲ್ಲಿ ಸರ್ಕಾರವು ಗರಿಷ್ಠ 1.5 ಲಕ್ಷ ರೂ. ಗಳ ಸಹಾಯ ನೀಡುತ್ತದೆ ಮತ್ತು 7 ದಿನಗಳ ಕಾಲ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಖರ್ಚು 1.5 ಲಕ್ಷ ರೂ. ಗಳಿಗಿಂತ ಹೆಚ್ಚಾದರೆ, ಹೆಚ್ಚಿನ ಬಿಲ್ ನ್ನು ರೋಗಿ ಅಥವಾ ಕುಟುಂಬ ಸದಸ್ಯರು ಪಾವತಿಸಬೇಕಾಗುತ್ತದೆ.

 

ಪ್ರಾಥಮಿಕ ಚಿಕಿತ್ಸೆಯ ನಂತರ ಆಸ್ಪತ್ರೆಯು ರೋಗಿಯನ್ನು ದೊಡ್ಡ ಆಸ್ಪತ್ರೆಗೆ ಉಲ್ಲೇಖಿಸಬೇಕಾದರೆ, ಆ ಆಸ್ಪತ್ರೆಯು ರೋಗಿಗೆ ಅವರು ಉಲ್ಲೇಖಿಸಲ್ಪಡುವ ಸ್ಥಳಕ್ಕೆ ಪ್ರವೇಶ ದೊರೆಯುವಂತೆ ನೋಡಿಕೊಳ್ಳಬೇಕು. 1.5 ಲಕ್ಷ ರೂ. ವರೆಗಿನ ನಗದು ರಹಿತ ಚಿಕಿತ್ಸೆಯ ನಂತರ, NHAI ಅದರ ಪಾವತಿಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಚಿಕಿತ್ಸೆಯ ನಂತರ, ರೋಗಿ 1.5 ಲಕ್ಷ. ರೂ. ಗಳವರೆಗೆ ಮೊತ್ತವನ್ನು ಪಾವತಿಸಬೇಕಾಗಿಲ್ಲ.

 

ಪೊಲೀಸರು ಅಥವಾ ಯಾವುದೇ ಸಂಘಟನೆಯು ಅಥವಾ ಸಾಮಾನ್ಯ ನಾಗರಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದ ತಕ್ಷಣ, ಅವರಿಗೆ ಚಿಕಿತ್ಸೆ ತಕ್ಷಣವೇ ಪ್ರಾರಂಭವಾಗುತ್ತದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ಠೇವಣಿ ಇಡಬೇಕಾಗಿಲ್ಲ. ಗಾಯಾಳುವಿನ ಕುಟುಂಬ ಸದಸ್ಯರು ಇದ್ದರೂ ಅಥವಾ ಇಲ್ಲದಿದ್ದರೂ ಆಸ್ಪತ್ರೆಯೇ ಅವರನ್ನು ನೋಡಿಕೊಳ್ಳುತ್ತದೆ. ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆಯನ್ನು ಗಾಯಾಳುವಿಗೆ ಒದಗಿಸಬೇಕಾಗುತ್ತದೆ ಎಂದು NHAI ತಿಳಿಸಿದೆ. 

 

ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರುವ ಮೊದಲು ಕಳೆದ 5 ತಿಂಗಳಲ್ಲಿ ಪುದುಚೇರಿ, ಅಸ್ಸಾಂ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಆರು ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ನಡೆಸಲಾಗಿತ್ತು. ಅದು ಯಶಸ್ವಿಯಾದ ನಂತರ ಈ ಯೋಜನೆಯನ್ನು ಭಾರತ ಸರಕಾರ ಇಡೀ ದೇಶಕ್ಕೆ ವಿಸ್ತರಿಸಿದೆ.