ಪುತ್ತೂರು: ಇತ್ತೀಚೆಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಬಂಧ ಬೆಳೆಸಿ ನಂತರ ವಂಚಿಸಿದ ಪುತ್ತೂರಿನ ಘಟನೆಯು ಬಹಳ ಚರ್ಚೆಗೆ ಕಾರಣವಾಗಿತ್ತು. ಇದೀಗ ಆರೋಪಿಯಾದ ಶ್ರೀಕೃಷ್ಣ ಜೆ. ರಾವ್ ಅವರನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಇಂತಹ ಪ್ರಕರಣಗಳಲ್ಲಿ ಮಹಿಳೆಯರಿಗೆ ಆಗುವ ತೊಂದರೆಗಳನ್ನು ಗಂಭೀರವಾಗಿ ಗುರುತಿಸಿದ್ದಾರೆ.
“ಈ ರೀತಿಯ ವಂಚನೆಗೆ ಜರುಗಿದರೆ ಅದು ಅತ್ಯಾಚಾರದ (ರೇಪ್) ಕೇಸ್ ಆಗುತ್ತದೆ. ಹೀಗೆ ಮಾಡಿದವರಿಗೆ ಕನಿಷ್ಠ ಹತ್ತು ವರ್ಷದ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಕೂಡ ವಿಧಿಸಬಹುದಾಗಿದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ‘ಇಲ್ಲಾ’ ಎಂಬುದು ಒಂದು ಕ್ರೂರತೆಯಂತೆ. ಈ ಪ್ರಕರಣದಲ್ಲಿ ಮಗು ಕೂಡ ಜನಿಸಿದ್ದು, ಬಳಿಕ ಮದುವೆ ನಿರಾಕರಿಸಲಾಗಿದೆ. ಇದನ್ನು ಯಾವತ್ತೂ ಸಹಿಸಲು ಸಾಧ್ಯವಿಲ್ಲ” ಎಂದು ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು.
“ಇಂತಹ ತಪ್ಪಿಗೆ ಭಾಗಿಯಾದವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ತಿಳಿದವರಾಗಲಿ ಅಥವಾ ತಿಳಿಯದವರಾಗಲಿ, ತಪ್ಪಿಗೆ ಶಿಕ್ಷೆ ತಪ್ಪಲ್ಲ,” ಎಂದು ಅವರು ಎಚ್ಚರಿಸಿದರು.