ದಕ್ಷಿಣ ಕನ್ನಡದ ಹಲವಾರು ಭಾಗಗಳಲ್ಲಿ ಮಾರ್ಚ್ 12ರ ಬುಧವಾರ ಉತ್ತಮ ಮಳೆಯಾಗಿದ್ದು ಬಿಸಿಲಿನಿಂದ ತತ್ತರಿಸುತ್ತಿದ್ದ ಜನರಿಗೆ ಕೊಂಚ ಸಮಾಧಾನ ದೊರೆತಿದೆ. ಗುಡುಗು ಸಹಿತ ಬಹಳ ಕಡೆ ಆಲಿಕಲ್ಲು ಮಳೆಯಾಗಿದೆ. ಇನ್ನೂ 2 ದಿವಸ ಮಳೆ ಬರುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಲ ಕೊಲ್ಲಿಯಲ್ಲಿ ಉಂಟಾಗುತ್ತಿರುವ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾದಾರಣವಾಗಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ಕೊಡಗಿನಲ್ಲೂ ಮಳೆಯಾಗುತ್ತಿದೆ.
ಇರಾಕ್ ಮತ್ತು ಬಾಂಗ್ಲಾ ಕರಾವಳಿ ಪ್ರದೇಶದಲ್ಲಿ ಎರಡೆರಡು ಚಂಡಮಾರುತ ಏಳಿರುವ ಕಾರಣ ದೇಶಾದ್ಯಂತ ಭರ್ಜರಿ ಮಳೆಯಾಗುವ ಮುನ್ಸೂಚನೆ ಇದೆ. ದೇಶದ ಒಟ್ಟು 18 ರಾಜ್ಯಗಳಲ್ಲಿ ಮಾರ್ಚ್ 15ನೇ ತಾರೀಕು ತನಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಒಂದು ಕಡೆ ಭಾರತದ ಪಶ್ಚಿಮದಲ್ಲಿ ಇರಾಕ್ ನಲ್ಲಿ ಏಳುವ ಚಂಡಮಾರುತದಿಂದ ಜಮ್ಮು- ಕಾಶ್ಮೀರ, ಹಿಮಾಚಲ ಪ್ರದೇಶ, ದೆಹಲಿ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ರಾಜಸ್ತಾನದಲ್ಲಿ ಮಳೆಯಾಗಲಿದೆ.
ಮತ್ತೊಂದು ಕಡೆ ಭಾರತದ ಪೂರ್ವದಲ್ಲಿ ಬಾಂಗ್ಲಾದೇಶದಲ್ಲಿ ಏಳುವ ಚಂಡಮಾರುತದ ಪ್ರಭಾವದಿಂದ ಬಿಹಾರ, ಪಶ್ಚಿಮ ಬಂಗಾಲ, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ, ತ್ರಿಪುರ, ತಮಿಳುನಾಡು ಮತ್ತು ಕೇರಳದಲ್ಲಿ ಮಳೆ. ಕೆಲವು ಕಡೆ ಭಾರಿ ಮಳೆಯಾದರೆ ಇನ್ನು ಕೆಲವಡೆ ಸಾಧಾರಣ ಮಳೆಯಾಗಲಿದೆ.