ಬಂಟ್ವಾಳ, ಮಾರ್ಚ್ 13, 2025 : ಶ್ರೀ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ವಾರ್ಷಿಕ ನೇಮೋತ್ಸವನ್ನು ನಿಲ್ಲಿಸಲು ಪ್ರಯತ್ನ ಪಡುವವರ ವಿರುದ್ಧ ಇಂದು ಶಂಬೂರುವಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇದೇ ಮಾರ್ಚ್ 9 ರಂದು ಎರಡು ತಂಡಗಳ ಮಧ್ಯೆ ಗೊಂದಲ ಉಂಟಾಗಿದ್ದು, ಅಧಿಕಾರಿಗಳು ಮತ್ತು ಪೊಲೀಸರ ಮಧ್ಯ ಪ್ರವೇಶದಿಂದ ಮಾರ್ಚ್ 9 ರಿಂದ 11 ರವರೆಗೆ ನಿಗದಿಯಾಗಿದ್ದ ನೇಮೋತ್ಸವ ಸ್ಥಗಿತಗೊಂಡಿತ್ತು.
'ಇಲ್ಲಿನ ವಾರ್ಷಿಕ ನೇಮೋತ್ಸವ ನಿಲ್ಲಿಸಲು ಪಿತೂರಿ ಮಾಡಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಗ್ರಾಮದ ಜನತೆಗೆ ದ್ರೋಹವೆಸಗಿದ ಮಾಜಿ ಸಚಿವರು, ಕಾರ್ಪೊರೇಟರ್ ಹಾಗೂ ಕನ್ಯಾಡಿ ಸ್ವಾಮೀಜಿ ಇವರುಗಳ ನಡವಳಿಕೆಯನ್ನು ಖಂಡಿಸಿ' ಎನ್ನುವ ಫಲಕವನ್ನು ಹಿಡಿದು ಶಂಭೂರು ಗ್ರಾಮಸ್ಥರು ಇಂದು ಬಿ.ಸಿ. ರೋಡಿನ ತಾಲೂಕು ಕಂದಾಯ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ತಾ.ಪಂ ಮಾಜಿ ಉಪಾಧ್ಯಕ್ಷ ಆನಂದ ಶಂಭೂರು ಮಾತನಾಡಿ, ಇಲ್ಲಿನ ನೇಮೋತ್ಸವ ನಡೆಯಲು ಈಗಾಗಲೇ ಗೊನೆ ಕಡಿಯುವ ಸಂಪ್ರದಾಯ ಮಾಡಲಾಗಿದೆ, ಆದರೆ ನೇಮ ನಡೆಸಲು ಅಧಿಕಾರಿಗಳು ತಡೆಯೊಡ್ಡಿದ್ದಾರೆ, ಇದು ನ್ಯಾಯ ಸಮ್ಮತದ ವಿಚಾರವಲ್ಲ ಎಂದರು.
ಭಕ್ತಿಯ ಕ್ಷೇತ್ರವಾಗಿರುವ ಕಲ್ಲಮಾಳಿಗೆ ನೇಮೋತ್ಸವ ನಿಲ್ಲಿಸಲು ಕಾರಣರಾದ ವ್ಯಕ್ತಿಗಳಿಗೆ ದೈವಗಳು ಸದ್ಬುದ್ಧಿ ನೀಡಿ ಮತ್ತೆ ವಿಜೃಂಭಣೆಯಿಂದ ನೇಮೋತ್ಸವ ನಡೆಯಲಿ ಎಂದು ಆಶಯ ವ್ಯಕ್ತ ಪಡಿಸಿದರು. ನಂಬಿಕೆಯ ಆಧಾರದ ಮೇಲೆ ನಡೆಯುವ ನೇಮೋತ್ಸವನ್ನು ಅಧಿಕಾರಿಗಳು ಮುನ್ನಡೆಸಲು ಅವಕಾಶ ಕೊಡಬೇಕೆಂದು ಕೇಳಿದರು. ಇಲ್ಲವಾದರೆ ಅಧಿಕಾರಿಗಳು ಮುಂದೆ ನಿಂತು ಅವರೇ ನೇಮೋತ್ಸವ ಮಾಡಬೇಕು ಎಂದು ಒತ್ತಾಯ ಮಾಡಿದರು.
ಕೇಶವ ಬರ್ಕೆ ಮಾತನಾಡಿ, ಸಮಸ್ಯೆ ಪರಿಹಾರವಾಗದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಹೋರಾಟ ನಡೆಸಲಿದ್ದೇವೆ ಎನ್ನುವ ಎಚ್ಚರದ ಮಾತನ್ನಾಡಿದರು. ಶಂಭೂರು ಗ್ರಾಮಸ್ಥರು ಆಧಾರ್ ಕಾರ್ಡ್ ಇರುವ ವ್ಯಕ್ತಿಗಳೇ ಇಲ್ಲಿ ಪ್ರತಿಭಟನೆ ನಡೆಸಲು ಇಲ್ಲಿಗೆ ಬಂದಿದ್ದಾರೆ ಹೊರತು, ಹೊರ ತಾಲೂಕಿನ ಫಾರ್ಚುನರ್ ಕಾರಿನಲ್ಲಿ ಬಂದಿಲ್ಲ ಎಂದು ಟಾಂಗು ಕೊಟ್ಟರು.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಯಸ್ಐ ದುರ್ಗಪ್ಪ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿತ್ತು. ಅಧ್ಯಕ್ಷ ಸಂತೋಷ್ ಕುಮಾರ್ ನರಿಕೊಂಬು, ಹೇಮಚಂದ್ರ ಭಂಡಾರದ ಮನೆ, ನವೀನ ಕೋಟ್ಯಾನ್, ಗಣೇಶ್ ಪ್ರಸಾದ್ ಜೆ. ಪೂಜಾರಿ ಮತ್ತಿತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಉಪತಶೀಲ್ದಾರ್ ನರೇಂದ್ರ ಭಟ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.