26 July 2025 | Join group

ಸಿಗಂದೂರು ಸೇತುವೆ ಉದ್ಘಾಟನೆ: ಪ್ರಧಾನಿ ಮೋದಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

  • 15 Jul 2025 01:09:50 AM

ಶಿವಮೊಗ್ಗ: ಜಿಲ್ಲೆಯ ಸಿಗಂದೂರು ಸೇತುವೆಯನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜುಲೈ 14 ರಂದು ಲೋಕಾರ್ಪಣೆಗೊಳಿಸಿದರು. ಈ ಸೇತುವೆ ಯೋಜನೆ ಭಾರತದ ಎರಡನೇ ಉದ್ದದ ಕೇಬಲ್-ಸ್ಟೇಡ್ ಬ್ರಿಡ್ಜ್ ಆಗಿದ್ದು, ಸುಮಾರು ₹456 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ.

 

ಈ ಮಹತ್ವದ ಮೂಲಸೌಕರ್ಯ ಯೋಜನೆಯು ಶಿವಮೊಗ್ಗ ಜಿಲ್ಲೆಯಲ್ಲಿ ಕಲಸವಳ್ಳಿ ಭಾಗದ ಮತ್ತು ಸಿಗಂದೂರು ಭಾಗದ ಸಂಪರ್ಕವನ್ನು ಸುಗಮಗೊಳಿಸುತ್ತದೆ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

 

ಆದರೆ ಈ ಕಾರ್ಯಕ್ರಮದ ಅಂಗವಾಗಿ ಶಿಷ್ಟಾಚಾರದ ಉಲ್ಲಂಘನೆ ನಡೆದಿದೆಯೆಂಬ ಆರೋಪ ರಾಜಕೀಯ ತೀಕ್ಷ್ಣತೆ ಪಡೆದುಕೊಂಡಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದಾರೆ.

 

ಅವರು ಪತ್ರದಲ್ಲಿ ಸಚಿವ ಗಡ್ಕರಿ ಅವರ ನಡೆ ಶಿಷ್ಟಾಚಾರ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಜುಲೈ 11ರಂದು ಮುಂದೂಡಲು ಸಚಿವರು ಒಪ್ಪಿಕೊಂಡರೂ, ಯಾವುದೇ ಪೂರ್ವ ಮಾಹಿತಿ ನೀಡದೆ ಜುಲೈ 14ರಂದು ಲೋಕಾರ್ಪಣೆ ಮಾಡಿರುವುದು ನಮಗೆ ಬೇಸರ ಉಂಟುಮಾಡಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಯು ಸೇರಿದಂತೆ ಯಾವ ಅಧಿಕಾರಿಗೂ ಸೂಕ್ತ ಆಹ್ವಾನ ನೀಡಲಾಗಿಲ್ಲ ಎಂದು ಅವರು ದೂರಿದ್ದಾರೆ.

 

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11 ರಂದು ಹಾಗೂ ಬಳಿಕ ಮತ್ತೊಮ್ಮೆ ಲಿಖಿತವಾಗಿ ಆಹ್ವಾನ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಅವರು ಈ ಘಟನೆಯಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆ ನಡೆದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಗಡ್ಕರಿ ಅವರು ಈ ಯೋಜನೆಯ ಉದ್ಘಾಟನೆಗೂ ಮುನ್ನ ರಾಜ್ಯ ಸರ್ಕಾರದ ಮುಖ್ಯಮಂತ್ರಿಗೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿಯೊಂದಿಗೆ ಆಹ್ವಾನ ನೀಡಲಾಗಿತ್ತು ಎಂದು ತಮ್ಮ ಟ್ವೀಟಿನಲ್ಲಿ ಹೇಳಿದ್ದಾರೆ.

 

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಹಲವಾರು ಸಚಿವರು, ಶಾಸಕರು ಸೇತುವೆ ಲೋಕಾರ್ಪಣಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು.