ಪುತ್ತೂರು : ಒಂದು ಕಾಲದಲ್ಲಿ ಆಟೋರಿಕ್ಷಾ ಚಾಲಕ, ನಂತರದ ದಿನಗಳಲ್ಲಿ ಅಂಬಾಸಿಡಾರ್ ಕಾರು, ಆಮೇಲೆ ಬಳಸಿದ ಕಾರಿಗೆ ಫೈನಾನ್ಸ್ ಹೀಗೆ ಹಲವಾರು ಉದ್ಯಮಗಳನ್ನು ನಡೆಸಿ ಕೊನೆಗೆ ಮೇಘ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಯಜಮಾನ, ಇಂದು ಅತೀ ಬೆಲೆ ಬಾಳುವ ರೋಲ್ಸ್ ರಾಯ್ ಕಾರಿನ ಮಾಲೀಕ. ಯಾಕೆಂದರೆ ಇವರು ಈಗಾಗಲೇ ಸಾವಿರ ಕೋಟಿಯ ಒಡೆಯ.
ಹೌದು, ಪುತ್ತೂರು ತಾಲೂಕಿನ ಬೆಳ್ಳಾರೆ ಗ್ರಾಮದ ಸತ್ಯ ಶಂಕರ್ ಇಂದು ಕರ್ನಾಟಕ ರಾಜ್ಯದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಪ್ರತಿಯೊಬ್ಬರ ಬಾಯಿಯಲ್ಲಿ ನೀರೂರಿಸುವ ಬಿಂದು ಜೀರಾ ಸೋಡಾ, ಇಂಟರ್ನ್ಯಾಷನಲ್ ಬ್ರಾಂಡ್ ಗೆ ಠಕ್ಕರ್ ಕೊಡುತ್ತಿದೆ ಅಂದರೆ, ಅದಕ್ಕೆ ಕಾರಣ ಇದೆ ಸತ್ಯ ಶಂಕರ್ ರವರ ಮೆದುಳಿನ ಆಟ. ಭಾರತೀಯ ಗ್ರಾಹಕರ ನಾಡಿಮಿಡಿತ ತಿಳಿದ ಇವರು ಬಿಂದು ಜೀರಾ ಸೋಡಾ ಎನ್ನುವ ಪಾನೀಯವನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಇಂದು ಪಾನೀಯ ಜಗತ್ತಿನಲ್ಲಿ ಬಹಳ ಎತ್ತರದ ಹೆಸರನ್ನು ಗಳಿಸಿಕೊಂಡವರು.
ಒಬ್ಬ ಉದ್ಯಮಿ ರೋಲ್ಸ್ ರಾಯ್ಸ್ ಕಾರು ಖರೀದಿಸಿರುವ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾಗುವುದು ಸರಿಯೇ ಅಥವಾ ತಪ್ಪೇ ಎಂಬುದೇ ವಿವಾದದ ವಿಷಯವಾಗಬಹುದು. ಆದರೆ ಸುಧಾವಾಣಿಯಲ್ಲಿ, ಒಂದು ಕಾಲದಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ದಕ್ಷಿಣ ಕನ್ನಡದ ಪುತ್ತೂರಿನ ಈ ವ್ಯಕ್ತಿ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿರುವುದು ಪುತ್ತೂರು ತಾಲೂಕಿಗೆ ಮಾತ್ರವಲ್ಲ, ಇಡೀ ಜಿಲ್ಲೆಗೆ ಹೆಮ್ಮೆ ತರುವ ಸಂಗತಿಯಾಗಿದೆ ಎಂಬ ವಿಷಯವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.
ಇವರ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ದೇಶ-ವಿದೇಶಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲಿ ಎಂಬುದು ಪ್ರತಿಯೊಬ್ಬ ಓದುಗನ ಆಶಯ..